ಬೆಂಗಳೂರು: ನಗರದ ಹಸಿರೀಕರಣಕ್ಕೆ ಸಂಬಂಧಿಸಿದಂತೆ ಯುವಜನರ ಸಲಹೆ ಕುರಿತ ವರದಿಯನ್ನು ವಿಮೋವೆ ಫೌಂಡೇಷನ್ ಮಂಗಳವಾರ ಸರ್ಕಾರಕ್ಕೆ ಸಲ್ಲಿಸಿತು.
ಯೂತ್ ವಾಯ್ಸ್ ಫಾರ್ ಗ್ರೀನ್ ಬ್ರ್ಯಾಂಡ್ ಬೆಂಗಳೂರು ಹೆಸರಿನಲ್ಲಿ ಮೂರು ತಿಂಗಳು ಅಭಿಯಾನ ನಡೆಸಲಾಯಿತು. ಇದರಲ್ಲಿ ಪಿಯು, ಪದವಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಐ.ಟಿ ಉದ್ಯೋಗಿಗಳು ಪಾಲ್ಗೊಂಡು ನಗರದ ಹಸಿರೀಕರಣಕ್ಕೆ ತಮ್ಮ ಸಲಹೆ ನೀಡಿದ್ದಾರೆ.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಫೌಂಡೇಷನ್ನ ನಿರ್ದೇಶಕ ವಿನಯ್ ಶಿಂಧೆ ಅವರು ವರದಿಯ ಪ್ರತಿಯನ್ನು ಸಲ್ಲಿಸಿದರು.
ನಗರದಲ್ಲಿ ಉದ್ಯಾನಗಳ ಸಂಖ್ಯೆ ಹೆಚ್ಚಿಸುವುದು, ಶೌಚಾಲಯಗಳ ನಿರ್ವಹಣೆ, ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಮಳೆ ನೀರು ಸಂಗ್ರಹಕ್ಕೆ ಆದ್ಯತೆ ನೀಡುವುದು ಹಾಗೂ ಕೆರೆ, ಕಲ್ಯಾಣಿಗಳ ರಕ್ಷಣೆಗೆ ಪ್ರಾಮುಖ್ಯತೆ ನೀಡುವಂತೆ ಯುವಜನತೆ ಸಲಹೆ ನೀಡಿದ್ದಾರೆ.
ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಬಜೆಟ್ ರೂಪಿಸುವಲ್ಲಿ ಯುವಜನರ ಅಭಿಪ್ರಾಯ ಪಡೆಯಬೇಕು. ಗಿಡ, ಮರಗಳನ್ನು ಹೆಚ್ಚು ಬೆಳೆಸಬೇಕು, ಆಟದ ಮೈದಾನ ಹಾಗೂ ಉದ್ಯಾನಗಳನ್ನು ಅಭಿವೃದ್ಧಿ ಪಡಿಸಬೇಕು. ನಗರದ ಅಭಿವೃದ್ಧಿಗೆ ಪೌರಕಾರ್ಮಿಕರ ಸಲಹೆಗಳನ್ನು ಸ್ವೀಕರಿಸಬೇಕು. ಪರಿಸರ ಜಾಗೃತಿ ಕಾರ್ಯಕ್ರಮಗಳು ಮತ್ತು ಶಾಲಾ ಪಠ್ಯದಲ್ಲಿ ಪರಿಸರ ವಿಷಯ ಇರಬೇಕು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.