ಬೆಂಗಳೂರು: ಸಂಪಂಗಿರಾಮನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಸತ್ಯ (20) ಎಂಬುವವರ ಕೊಲೆ ಪ್ರಕರಣ ಭೇದಿಸಿರುವ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
‘ಒಡಿಶಾದ ರಂಜಿತ್ ಪ್ರಧಾನ್ (30) ಮತ್ತು ರಮೇಶ್ (32) ಬಂಧಿತರು. ಇವರಿಬ್ಬರು ಸೇರಿಕೊಂಡು, ಸತ್ಯ ಅವರನ್ನು ಮೇ 9ರಂದು ಕೊಂದು ಪರಾರಿಯಾಗಿದ್ದರು. ಕೊಲೆ ಬಗ್ಗೆ ಆರಂಭದಲ್ಲಿ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಪ್ರತ್ಯಕ್ಷದರ್ಶಿಗಳ ಹೇಳಿಕೆ ಹಾಗೂ ಇತರೆ ಮಾಹಿತಿ ಆಧರಿಸಿ ತನಿಖೆ ನಡೆಸಿದಾಗ, ಆರೋಪಿಗಳು ಸಿಕ್ಕಿಬಿದ್ದರು’ ಎಂದು ಪೊಲೀಸರು ಹೇಳಿದರು.
‘ಕೆ.ಎಸ್. ಗಾರ್ಡನ್ನ ಸತ್ಯ, ಬಾಲಕಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಪ್ರಕರಣದಲ್ಲಿ ಜೈಲು ಸೇರಿ ಜಾಮೀನು ಮೇಲೆ ಹೊರಗೆ ಬಂದಿದ್ದ’ ಎಂದರು.
‘ಆರೋಪಿಗಳಾದ ರಂಜಿತ್ ಹಾಗೂ ರಮೇಶ್, ಸಂಪಂಗಿರಾಮನಗರದ ನಿರ್ಮಾಣ ಹಂತದ ಕಟ್ಟಡದಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಅದೇ ಕಟ್ಟಡದಲ್ಲಿ ವಾಸವಿದ್ದರು. ಮೇ 9ರಂದು ಮದ್ಯದ ಅಮಲಿನಲ್ಲಿದ್ದ ಸತ್ಯ, ಕಟ್ಟಡಕ್ಕೆ ಹೋಗಿದ್ದರು. ಅದನ್ನು ಪ್ರಶ್ನಿಸಿದ್ದ ಆರೋಪಿಗಳು, ‘ಯಾರು ನೀನು? ಇಲ್ಲಿಗೆ ಏಕೆ ಬಂದಿದ್ದಿಯಾ?’ ಎಂಬುದಾಗಿ ವಿಚಾರಿಸಿದ್ದರು.’
‘ಸತ್ಯ ಹಾಗೂ ಆರೋಪಿಗಳ ನಡುವೆ ಗಲಾಟೆ ಶುರುವಾಗಿತ್ತು. ಕಟ್ಟಡದ ಸಮೀಪದಲ್ಲಿಯೇ ವಿದ್ಯುತ್ ತಂತಿಯೊಂದು ತುಂಡರಿಸಿ ಬಿದ್ದಿತ್ತು. ಅದರಲ್ಲಿ ವಿದ್ಯುತ್ ಪ್ರವಹಿಸುತ್ತಿತ್ತು. ಸತ್ಯ ಮೇಲೆ ಹಲ್ಲೆ ಮಾಡಿದ್ದ ಆರೋಪಿಗಳು, ವಿದ್ಯುತ್ ತಂತಿ ಮೇಲೆ ತಳ್ಳಿದ್ದರು. ತಂತಿ ತಗುಲುತ್ತಿದ್ದಂತೆ ವಿದ್ಯುತ್ ಪ್ರವಹಿಸಿ ಸತ್ಯ ಮೃತಪಟ್ಟಿದ್ದರು. ನಂತರ, ಆರೋಪಿಗಳು ಮೃತದೇಹವನ್ನು ಬೇರೊಂದು ಕಟ್ಟಡದಲ್ಲಿ ಎಸೆದು ಸ್ಥಳದಿಂದ ಪರಾರಿಯಾಗಿದ್ದರು’ ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.