ADVERTISEMENT

ಬೆಂಗಳೂರು | ಅವಧಿ ಮೀರಿ ವಹಿವಾಟಿಗೆ ಕಡಿವಾಣ: ಬಾರ್‌ ಮಾಲೀಕರಿಗೆ ಪೊಲೀಸರ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2024, 15:17 IST
Last Updated 21 ಜುಲೈ 2024, 15:17 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ನಗರದ ವಿವಿಧೆಡೆ ಅವಧಿ ಮೀರಿ ವಹಿವಾಟು ನಡೆಸುತ್ತಿದ್ದ ಬಾರ್, ಪಬ್‌, ರೆಸ್ಟೋರೆಂಟ್‌ಗಳನ್ನು ಪೊಲೀಸರು ಶನಿವಾರ ರಾತ್ರಿ ದಿಢೀರ್‌ ತಪಾಸಣೆ ನಡೆಸಿ, ಬಾಗಿಲು ಮುಚ್ಚಿಸಿದ್ದಾರೆ.

ವಾರಾಂತ್ಯದಲ್ಲಿ ನಿಗದಿತ ಅವಧಿಗಿಂತ ಹೆಚ್ಚಿನ ಸಮಯದವರೆಗೆ ಗ್ರಾಹಕರಿಗೆ ಮದ್ಯ ಮತ್ತು ಆಹಾರ ಸೇವನೆಗೆ ಅವಕಾಶ ನೀಡಲಾಗುತ್ತಿತ್ತು. ಇದರಿಂದ ತೊಂದರೆ ಅನುಭವಿಸಿದ ಅಕ್ಕ-ಪಕ್ಕದ ನಿವಾಸಿಗಳು ಪೊಲೀಸರಿಗೆ ಹಲವು ಬಾರಿ ದೂರು ನೀಡಿದ್ದರು.

ADVERTISEMENT

ಕೇಂದ್ರ ವಿಭಾಗದ ಡಿಸಿಪಿ ಎಚ್‌.ಟಿ.ಶೇಖರ್ ನೇತೃತ್ವದಲ್ಲಿ ಪೊಲೀಸರು ಶನಿವಾರ ರಾತ್ರಿ ವಿಶೇಷ ಕಾರ್ಯಾಚರಣೆ ನಡೆಸಿದರು. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ಸೇರಿದಂತೆ ವಿವಿಧೆಡೆ ಸರ್ಕಾರ ನಿಗದಿಪಡಿಸಿದ್ದ ಸಮಯವನ್ನೂ ಮೀರಿ ಅನಧಿಕೃತವಾಗಿ ವಹಿವಾಟಿನಲ್ಲಿ ತೊಡಗಿದ್ದ ಎಲ್ಲಾ ಪಬ್, ಬಾರ್, ರೆಸ್ಟೋರೆಂಟ್‌ಗಳ ಮಾಲೀಕರಿಗೆ ಎಚ್ಚರಿಕೆ ನೀಡಿ ಬಂದ್ ಮಾಡಿಸಲಾಯಿತು. ಕೆಲವೆಡೆ ನಿಗದಿತ ಸಮಯಕ್ಕೆ ಸರಿಯಾಗಿ ಮದ್ಯದಂಗಡಿಗಳನ್ನು ಬಂದ್‌ ಮಾಡಲಾಗಿತ್ತು.

‘ಅವಧಿ ಮೀರಿ ವಹಿವಾಟು ನಡೆಸುತ್ತಿದ್ದ ಪಬ್, ಬಾರ್, ರೆಸ್ಟೋರೆಂಟ್‌ಗಳ ವಿರುದ್ಧ ಎರಡು ವಾರಗಳಿಂದ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಳೆದ ವಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಐದು ಪ್ರಕರಣ ದಾಖಲಿಸಲಾಗಿತ್ತು. ನಿಗದಿತ ಸಮಯಕ್ಕೆ ಬಾರ್, ಪಬ್‌, ರೆಸ್ಟೋರೆಂಟ್‌ಗಳ ವಹಿವಾಟು ಸ್ಥಗಿತವಾಗುತ್ತಿದೆಯೇ ಎಂಬುದನ್ನು ನಿತ್ಯ ರಾತ್ರಿ ಗಸ್ತು ಸಿಬ್ಬಂದಿ ಪರಿಶೀಲಿಸುತ್ತಿದ್ದಾರೆ. ಸರ್ಕಾರ ನಿಗದಿಪಡಿಸಿದ ಸಮಯ ಮೀರಿ ಯಾವುದೇ ಪಬ್, ಬಾರ್, ರೆಸ್ಟೋರೆಂಟ್‌ಗಳು ವಹಿವಾಟಿನಲ್ಲಿ ತೊಡಗಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಕೇಂದ್ರ ವಿಭಾಗದ ಶೇಖರ್‌ ತಿಳಿಸಿದರು.

ಅವಧಿ ಮೀರಿ ಪಬ್ ತೆರೆದು ನಿಯಮ ಉಲ್ಲಂಘಿಸಿದ್ದ ಆರೋಪದಡಿ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಅವರು ಸಹ ಪಾಲುದಾರ ಆಗಿರುವ ಕಸ್ತೂರಬಾ ರಸ್ತೆಯ ‘ಒನ್–8’ ಪಬ್‌ ವ್ಯವಸ್ಥಾಪಕ ಹಾಗೂ ಬ್ರಿಗೇಡ್ ರಸ್ತೆಯಲ್ಲಿರುವ ಫೋರಂ ರೆಕ್ಸವಾಲ್ಕ್‌ ಕಟ್ಟಡದ ನಾಲ್ಕನೇ ಮಹಡಿಯಲ್ಲಿರುವ ಪ್ಯಾಂಜಿಯೊ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ವಿರುದ್ಧ ಜುಲೈ 9ರಂದು ಪ್ರಕರಣ ದಾಖಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.