ADVERTISEMENT

ರಾಜರಾಜೇಶ್ವರಿನಗರ: ರಸ್ತೆಯಲ್ಲಿ ಗುಂಡಿ, ಮೋರಿಯಿಂದ ದುರ್ನಾತ

ಗಜಾನನ ನಗರ ಸಂಪರ್ಕಿಸುವ ಸೊಲ್ಲಾಪುರದಮ್ಮ ದೇವಸ್ಥಾನದ ಮುಖ್ಯರಸ್ತೆಯ ದುಃಸ್ಥಿತಿ

​ಪ್ರಜಾವಾಣಿ ವಾರ್ತೆ
Published 14 ಜೂನ್ 2024, 15:35 IST
Last Updated 14 ಜೂನ್ 2024, 15:35 IST
ಸೊಲ್ಲಾಪುರದಮ್ಮ ರಸ್ತೆಯ ಬೆಂಗಳೂರು ಜಲಮಂಡಳಿ ಕಚೇರಿ ಎದುರು ಚರಂಡಿಯಲ್ಲಿ ಕಲುಷಿತ ನೀರು ಶೇಖರಣೆಯಾಗಿದೆ
ಸೊಲ್ಲಾಪುರದಮ್ಮ ರಸ್ತೆಯ ಬೆಂಗಳೂರು ಜಲಮಂಡಳಿ ಕಚೇರಿ ಎದುರು ಚರಂಡಿಯಲ್ಲಿ ಕಲುಷಿತ ನೀರು ಶೇಖರಣೆಯಾಗಿದೆ   

ರಾಜರಾಜೇಶ್ವರಿನಗರ: ಮಾಗಡಿ ಮುಖ್ಯರಸ್ತೆಯಿಂದ ಗಜಾನನ ನಗರಕ್ಕೆ ಸಂಪರ್ಕ ಕಲ್ಪಿಸುವ ಸೊಲ್ಲಾಪುರದಮ್ಮ ದೇವಸ್ಥಾನದ ರಸ್ತೆ ಹಾಳಾಗಿದೆ. ರಸ್ತೆಯ ಅಕ್ಕಪಕ್ಕದಲ್ಲಿರುವ ಚರಂಡಿಗಳಲ್ಲಿ ನಿಂತ ನೀರಿನಿಂದ ತೊಂದರೆಯಾಗಿದೆ. 

ಚನ್ನಕೇಶವ ಬೇಕರಿಯಿಂದ ಸೊಲ್ಲಾಪುರದಮ್ಮ ದೇವಸ್ಥಾನದವರೆಗಿನ ರಸ್ತೆಯ ಎರಡೂ ಬದಿಯಲ್ಲಿ ಚರಂಡಿ ಕುಸಿದಿದೆ. ಚಪ್ಪಡಿ ಕಲ್ಲುಗಳು ಕಿತ್ತುಹೋಗಿವೆ. ಚರಂಡಿಯಲ್ಲಿ ನೀರು ನಿಂತು ದುರ್ವಾಸನೆ ಬೀರುತ್ತಿದೆ. ಸೊಳ್ಳೆ ಉತ್ಪತ್ತಿಯ ತಾಣವಾಗಿದೆ.

ಈ ರಸ್ತೆಯಲ್ಲಿ ಅಶ್ವತ್ಥ ಕಟ್ಟೆಗಳು, ವೃದ್ಧಾಶ್ರಮ, ಶನೇಶ್ವರ, ಸೊಲ್ಲಾಪುರದಮ್ಮ ದೇವಸ್ಥಾನಗಳಿವೆ. ಕುಂಚಿಟಿಗರ ಸಾರ್ವಜನಿಕ ವಿದ್ಯಾರ್ಥಿನಿಲಯ, ಕುಂಚಿಟಿಗರ ಶ್ರೀಗಂಧ ವಿದ್ಯೋದಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಇದೆ. ಗಜಾನನ ನಗರದಲ್ಲಿ ನಾಗದೇವತಾ, ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನ ಬರುತ್ತವೆ. ಜನಸಂದಣಿ ಹೆಚ್ಚಾಗಿರುವ ಈ ರಸ್ತೆಯುಲ್ಲಿ, ಪಾದಚಾರಿ ಮಾರ್ಗದಲ್ಲಿನ ಸಿಮೆಂಟ್‌ ಕಲ್ಲುಗಳು ಕಿತ್ತು ಬಂದಿವೆ. ಜನರು ನಡೆಯಲು ಹರಸಾಹಸಪಡುತ್ತಾರೆ.

ADVERTISEMENT

‘ಕೆಲವೆಡೆ ಮಳೆ ಬಂದಾಗ ಚರಂಡಿ ನೀರಿನ ಜೊತೆಗೆ, ಒಳಚರಂಡಿಯ ನೀರು ರಸ್ತೆಯ ಮೇಲೆ ಹರಿಯುತ್ತದೆ. ಅಲ್ಲಲ್ಲಿ ಕಸ ಮತ್ತು ತ್ಯಾಜ್ಯ ಬಿದ್ದಿದೆ. ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ‘ ಎಂದು ನಾಗರಿಕರು ದೂರುತ್ತಾರೆ.

‘ಈ ಪ್ರದೇಶದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಒಂದೇ ಪಕ್ಷದ ಶಾಸಕರು, ಸಂಸದರು ಇದ್ದರೆ, ಅಭಿವೃದ್ಧಿ ಕಾರ್ಯಗಳು ನಡೆಯುತ್ತವೆ ಎಂದು ಚುನಾವಣೆ ವೇಳೆ ಮತ ಕೇಳಲು ಬರುವ ಪಕ್ಷದ ಮುಖಂಡರು ಹೇಳುತ್ತಾರೆ. ನಾವು ಪ್ರತಿಬಾರಿಯೂ ಮತ ಹಾಕುತ್ತೇವೆ. ಆದರೆ ಅಭಿವೃದ್ಧಿ ಮಾತ್ರ ಶೂನ್ಯ ಎಂದು ಗೀತಾ, ಶೋಭಾ ಗೌಡ ಅವರು ಬೇಸರ ವ್ಯಕ್ತಪಡಿಸಿದರು.

ಮಳೆಗಾಲ ಆರಂಭವಾಗಿದೆ. ಚರಂಡಿಗಳು ಭರ್ತಿಯಾಗಿ ಕೊಳಚೆ ನೀರು ರಸ್ತೆಗೆ ಹರಿಯುತ್ತದೆ. ರಸ್ತೆಯಲ್ಲಿರುವ ಗುಂಡಿಗಳಲ್ಲಿ ಮಳೆ ನೀರು ನಿಂತು, ವಾಹನ ಸಂಚಾರರಿಗೆ ತುಂಬಾ ತೊಂದರೆಯಾಗುತ್ತದೆ. ಸ್ಥಳೀಯ ಜನಪ್ರತಿನಿಧಿಗಳು, ರಸ್ತೆ, ಚರಂಡಿ ಅವ್ಯವಸ್ಥೆ ಸರಿಪಡಿಸುವತ್ತ ಗಮನಹರಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.

ಅಶ್ವತ್ಥ ಕಟ್ಟೆ ಬಳಿ ಪಾದಚಾರಿ ಮಾರ್ಗದಲ್ಲಿನ ಕಲ್ಲುಗಳು ಕಿತ್ತು ಬಂದಿವೆ
ವೃದ್ಧಾಶ್ರಮ ಬಳಿ ಚರಂಡಿ ಕಿತ್ತು ಹೋಗಿರುವುದು.
ಚಿತ್ರ 4 : ರಸ್ತೆಯಲ್ಲಿ ಹರಿಯುವ ಚರಂಡಿ ನೀರು.
ಚಿತ್ರ 5 : ಸೊಲ್ಲಾಪುರದಮ್ಮ ದೇವಸ್ಥಾನ ಬಳಿಯ ರಸ್ತೆಯಲ್ಲಿ ಕಸದ ರಾಶಿ.
ಚಿತ್ರ 6 : ನಾಗದೇವತಾ. ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನ ಬಳಿ ಕಸದ ರಾಶಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.