ಬೆಂಗಳೂರು: ‘ವಿಧಾನ ಪರಿಷತ್ನ ಬೆಂಗಳೂರು ಪದವೀಧರರ ಕ್ಷೇತ್ರದಲ್ಲಿ ಬಿಜೆಪಿ ಸೋಲಿನ ಭೀತಿ ಎದುರಿಸುತ್ತಿದೆ. ಹತಾಶೆಯಿಂದ ಕಾಂಗ್ರೆಸ್ ಅಭ್ಯರ್ಥಿ ರಾಮೋಜಿಗೌಡ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಆರೋಪಿಸಿದರು.
ಪಕ್ಷದ ಮುಖಂಡರೊಂದಿಗೆ ಸೋಮವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಅವರು,‘ಈ ಬಾರಿ ರಾಮೋಜಿಗೌಡ ಅವರು ಗೆಲ್ಲುವುದು ಖಚಿತ. ಅದನ್ನು ತಪ್ಪಿಸಲು ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ. ನಮ್ಮ ಅಭ್ಯರ್ಥಿಯ ಕುಟುಂಬದವರು ನೂರಾರು ವರ್ಷಗಳಿಂದ ಕೋಲಾರದಲ್ಲಿ ನೆಲೆಸಿದ್ದಾರೆ. ಆದರೆ, ಅವರು ರಾಜ್ಯದವರಲ್ಲ ಎಂದು ಬಿಂಬಿಸಿ ರಾಜಕೀಯ ಲಾಭ ಪಡೆಯುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ’ ಎಂದರು.
ರಾಮೋಜಿಗೌಡ ಮಾತನಾಡಿ, ‘ನಾನು ಒಕ್ಕಲಿಗನಲ್ಲ, ಮರಾಠಿ ಸಮುದಾಯದವ, ಆಂಧ್ರಪ್ರದೇಶ ಮೂಲದವನು ಎಂದು ಸುಳ್ಳು ಹಬ್ಬಿಸುತ್ತಿದ್ದಾರೆ. ಪದವೀಧರರ ಕ್ಷೇತ್ರದ ಸದಸ್ಯ ಯಾರು ಎಂಬುದು ಯಾರಿಗೂ ಗೊತ್ತಿಲ್ಲ. ಅದು ಅವರ ಯೋಗ್ಯತೆ’ ಎಂದರು.
‘ನನ್ನ ಜಾತಿ, ಊರಿನ ಬಗ್ಗೆ ಪ್ರತಿಸ್ಪರ್ಧಿ ಪಕ್ಷದವರು ಮಾತನಾಡಿದ್ದಾರೆ. ಇದರಿಂದ ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ನನ್ನ ಬಗ್ಗೆ ಮಾತನಾಡುತ್ತಿರುವ ಬಿಜೆಪಿ ಶಾಸಕರು ಯಾವ ರಾಜ್ಯದವರು? ಯಾವ ಊರಿನವರು? ಅವರ ವೃತ್ತಿ ಏನು’ ಎಂದು ಕೇಳಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್, ವಿಧಾನ ಪರಿಷತ್ನ ಮಾಜಿ ಸಭಾಪತಿ ವಿ.ಆರ್. ಸುದರ್ಶನ್, ಮಾಜಿ ಸದಸ್ಯ ಎಂ. ನಾರಾಯಣಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.