ಬೆಂಗಳೂರು: ವಿಧಾನ ಪರಿಷತ್ನ ಶಿಕ್ಷಕರು ಮತ್ತು ಪದವೀಧರರ ಕ್ಷೇತ್ರಗಳ ಚುನಾವಣೆಯಲ್ಲಿ ಪ್ರತಿ ಮತಗಟ್ಟೆಗೆ ಒಬ್ಬ ಉಸ್ತುವಾರಿಯನ್ನು ನೇಮಿಸಲು ಬಿಜೆಪಿ ನಿರ್ಧರಿಸಿದೆ.
ಪಕ್ಷದ ಪದಾಧಿಕಾರಿಗಳು, ವಿಧಾನ ಪರಿಷತ್ ಸದಸ್ಯರು ಮತ್ತು ಚುನಾವಣಾ ಉಸ್ತುವಾರಿಗಳ ಜತೆ ಶನಿವಾರ ಸಭೆ ನಡೆಸಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಪರಿಷತ್ ಚುನಾವಣಾ ತಯಾರಿ ಕುರಿತು ಚರ್ಚಿಸಿದರು. ತಕ್ಷಣದಿಂದಲೇ ಸ್ಥಳೀಯ ಮಟ್ಟದಲ್ಲಿ ಚುನಾವಣಾ ಉಸ್ತುವಾರಿಗಳನ್ನು ನೇಮಿಸಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
‘ಎಲ್ಲ ಮತಗಟ್ಟೆಗಳಿಗೂ ತಲಾ ಒಬ್ಬ ಉಸ್ತುವಾರಿಗಳನ್ನು ಪಕ್ಷದಿಂದ ನೇಮಿಸಲಾಗುವುದು. ಅವರ ಮೇಲುಸ್ತುವಾರಿಗೆ ವಿಧಾನಸಭಾ ಕ್ಷೇತ್ರಕ್ಕೊಬ್ಬ ಉಸ್ತುವಾರಿಯನ್ನು ನೇಮಿಸಲಾಗುವುದು. ಸಂಪೂರ್ಣ ಜವಾಬ್ದಾರಿಯನ್ನು ಕ್ಷೇತ್ರ ಮಟ್ಟದ ಚುನಾವಣಾ ಉಸ್ತುವಾರಿಗೆ ವಹಿಸಲಾಗುವುದು’ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ತಕ್ಷಣದಿಂದಲೇ ಮತಗಟ್ಟೆ ಹಂತದಲ್ಲಿ ಕಾರ್ಯಪ್ರವೃತ್ತರಾಗುವಂತೆ ವಿಜಯೇಂದ್ರ ಅವರು ಪಕ್ಷದ ಪದಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮತದಾರರ ಸಂಪರ್ಕ ಅಭಿಯಾನವನ್ನೂ ಚುರುಕುಗೊಳಿಸುವಂತೆ ನಿರ್ದೇಶನ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.