ADVERTISEMENT

ಬೆಂಗಳೂರು | ಹಣ ಕದ್ದು ಪರಾರಿ: ಬೆನ್ನಟ್ಟಿ ಆರೋಪಿ ಸೆರೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2023, 14:50 IST
Last Updated 12 ಡಿಸೆಂಬರ್ 2023, 14:50 IST
ಕಳ್ಳತನ (ಪ್ರಾತಿನಿಧಿಕ ಚಿತ್ರ)
ಕಳ್ಳತನ (ಪ್ರಾತಿನಿಧಿಕ ಚಿತ್ರ)   

ಬೆಂಗಳೂರು: ಬಿಎಂಟಿಸಿ ಬಸ್‌ಗಾಗಿ ಕಾಯುತ್ತ ನಿಂತಿದ್ದ ಮಹಿಳಾ ಪ್ರಯಾಣಿಕರೊಬ್ಬರ ₹ 11 ಸಾವಿರ ಕಿತ್ತುಕೊಂಡು ಪರಾರಿಯಾಗುತ್ತಿದ್ದ ಆರೋಪಿ ಕವಿತಾ (33) ಅವರನ್ನು ಆಟೊ ಚಾಲಕನ ಸಹಾಯದೊಂದಿಗೆ ಬೆನ್ನಟ್ಟಿ ಹಿಡಿದು ಬೊಮ್ಮನಹಳ್ಳಿ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.

‘ಡಿ. 9ರಂದು ಬೆಳಿಗ್ಗೆ ನಡೆದಿರುವ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿ ಕವಿತಾರನ್ನು ಸೆರೆ ಹಿಡಿಯಲಾಗಿದೆ. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಮಹಿಳಾ ಪ್ರಯಾಣಿಕರೊಬ್ಬರು ಸಿಲ್ಕ್‌ ಬೋರ್ಡ್‌ ಜಂಕ್ಷನ್‌ನಲ್ಲಿ ಬಸ್ಸಿಗಾಗಿ ಕಾಯುತ್ತಿದ್ದರು. ₹ 11 ಸಾವಿರ ಹಣವಿದ್ದ ಬ್ಯಾಗ್ ಅವರ ಬಳಿ ಇತ್ತು. ಮುಖಕ್ಕೆ ಸ್ಕಾರ್ಫ್‌ ಹಾಕಿಕೊಂಡಿದ್ದ ಆರೋಪಿ ಆರೋಪಿ ಕವಿತಾ ಸ್ಥಳಕ್ಕೆ ಬಂದಿದ್ದರು. ಕೆಲ ನಿಮಿಷ ಸ್ಥಳದಲ್ಲಿ ನಿಂತಿದ್ದರು. ಏಕಾಏಕಿ ಬ್ಯಾಗ್ ಕಿತ್ತುಕೊಂಡು ಸ್ಥಳದಿಂದ ಓಡಲಾರಂಭಿಸಿದ್ದರು’.

ADVERTISEMENT

‘ಆರೋಪಿ ಹಿಂದೆಯೇ ಓಡಲಾರಂಭಿಸಿದ್ದ ಮಹಿಳೆ, ರಸ್ತೆಯಲ್ಲಿ ಆಟೊ ಸಮೇತ ನಿಂತಿದ್ದ ಚಾಲಕ ಯೂಸೂಫ್ ಅವರ ಸಹಾಯ ಕೋರಿದ್ದರು. ನಂತರ, ಇಬ್ಬರು ಆರೋಪಿಯನ್ನು ಬೆನ್ನಟ್ಟಿದ್ದರು. ರೂಪೇನ್ ಅಗ್ರಹಾರದ ರಸ್ತೆಯಲ್ಲಿ ಆರೋಪಿ ಕವಿತಾ ಸಿಕ್ಕಿಬಿದ್ದಿದ್ದರು. ಬ್ಯಾಗ್ ತನ್ನದೆಂದು ಆರೋಪಿ ವಾದಿಸಿದ್ದರು. ಸ್ಥಳದಲ್ಲಿ ಸೇರಿದ್ದ ಜನ ಸಹ ಆರೋಪಿ ಪರ ಮಾತನಾಡಿದ್ದರು.’

‘ಮಹಿಳಾ ಪ್ರಯಾಣಿಕರು ಘಟನೆ ಬಗ್ಗೆ ವಿವರಿಸಿ, ಬ್ಯಾಗ್‌ನಲ್ಲಿರುವ ವಸ್ತುಗಳ ಗುರುತು ಹೇಳಿದ್ದರು. ಆರೋಪಿ ಯಾವುದೇ ಗುರುತು ಹೇಳಿರಲಿಲ್ಲ. ಚಾಲಕ ಹಾಗೂ ಸ್ಥಳೀಯರು, ಕವಿತಾ ಅವರನ್ನು ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ ಸುಪರ್ದಿಗೆ ಒಪ್ಪಿಸಿದ್ದರು. ಇದೇ ಮೊದಲ ಬಾರಿಗೆ ಆರೋಪಿ ಕೃತ್ಯ ಎಸಗಲು ಯತ್ನಿಸಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.