ಪ್ರಜಾವಾಣಿ ವಾರ್ತೆ
ಬೆಂಗಳೂರು: 69ನೇ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಸ್ವಪ್ನ ಬುಕ್ ಹೌಸ್ ನ.1ರಂದು ಪುಸ್ತಕ ಜಾತ್ರೆ ಮತ್ತು ಕನ್ನಡ ಬರಹಗಾರರ ಸಮ್ಮಿಲನವನ್ನು ಹಮ್ಮಿಕೊಂಡಿದೆ.
ಸ್ವಪ್ನ ಪುಸ್ತಕ ಮಳಿಗೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ಒಂದು ಕನ್ನಡ ಪುಸ್ತಕವನ್ನು ಕೊಡುಗೆಯಾಗಿ ನೀಡುವ ಮೂಲಕ ರಾಜ್ಯೋತ್ಸವ ಆಚರಿಸಲಾಗುವುದು ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.
ಕಾರ್ಯಕ್ರಮವನ್ನು ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ ಉದ್ಘಾಟಿಸುವರು. ನಟಿ ಅಂಕಿತಾ ಅಮರ್ ಅವರು ಕನ್ನಡ ಜ್ಯೋತಿ ಬೆಳಗಲಿದ್ದಾರೆ. ಸಾಹಿತಿ ಎಸ್.ಜಿ. ಸಿದ್ದರಾಮಯ್ಯ ಉಚಿತ ಪುಸ್ತಕ ವಿತರಣೆ ಮಾಡಲಿದ್ದಾರೆ. ಶ್ರೀರಾಮಪುರ ಲಿಟಲ್ ಫ್ಲವರ್ ಪ್ರೌಢಶಾಲೆಯ ಮಕ್ಕಳಿಂದ ಡೊಳ್ಳು ಕುಣಿತ, ವಾದ್ಯವೃಂದದವರಿಗೆ ಗೌರವ ವಂದನೆ ಇರಲಿದೆ. ಹಾಸ್ಯ ಸಾಹಿತಿಗಳಾದ ಎಂ.ಎಸ್. ನರಸಿಂಹಮೂರ್ತಿ, ವೈ.ವಿ. ಗುಂಡೂರಾವ್ ಅವರಿಂದ ಹಾಡು ಹರಟೆ ನಡೆಯಲಿದೆ. ಕೃತಿಕಾ ಶ್ರೀನಿವಾಸ್ ಕನ್ನಡ ಗೀತೆಗಳನ್ನು, ಅಪ್ಪಗೆರೆ ತಿಮ್ಮರಾಜು ಜನಪದ ಮತ್ತು ಭಾವಗೀತೆ ಹಾಡಲಿದ್ದಾರೆ.
ಲೇಖಕರಾದ ಹಂ.ಪ.ನಾಗರಾಜಯ್ಯ, ದೊಡ್ಡರಂಗೇಗೌಡ, ಮಲ್ಲೇಪುರಂ ವೆಂಕಟೇಶ, ಟಿ.ಆರ್. ಅನಂತರಾಮ್, ಬಿ.ಆರ್. ಲಕ್ಷ್ಮಣರಾವ್, ರಾ.ನಂ. ಚಂದ್ರಶೇಖರ್, ಡಿ.ವಿ. ಗುರುಪ್ರಸಾದ್, ವಿಶ್ವೇಶ್ವರ ಭಟ್, ಜೋಗಿ, ಎಸ್.ಕೆ. ಉಮೇಶ್, ಹಿ.ಚಿ. ಬೋರಲಿಂಗಯ್ಯ, ಎಚ್.ಎಲ್. ಪುಷ್ಪಾ, ವಸುಂಧರಾ ಭೂಪತಿ, ಪದ್ಮಿನಿ ನಾಗರಾಜ್ ಪಾಲ್ಗೊಳ್ಳಲಿದ್ದಾರೆ. ಪುಸ್ತಕ ಖರೀದಿದಾರರಿಗೆ ನವೆಂಬರ್ ತಿಂಗಳಲ್ಲಿ ವಿಶೇಷ ರಿಯಾಯಿತಿ ಇರಲಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.