ಕೆಂಗೇರಿ: ಪುಸ್ತಕ ಪೂಜೆ ಒಂದು ಅನನ್ಯ ಚಿಂತನೆ. ಓದಿನ ಹವ್ಯಾಸವನ್ನು ಪ್ರೇರೇಪಿಸುವ ಈ ಸಂಸ್ಕೃತಿ ಜಾತಿ –ಧರ್ಮಗಳನ್ನು ಮೀರಿ ಸರ್ವ ವ್ಯಾಪಿಯಾಗಬೇಕಿದೆ ಎಂದು ಜನ ಸೇವಾ ವಿದ್ಯಾ ಕೇಂದ್ರದ ಗೌರವ ಕಾರ್ಯದರ್ಶಿ ನಿರ್ಮಲ್ ಕುಮಾರ್ ಹೇಳಿದರು.
ದಸರಾ ಹಾಗೂ ವಿಜಯದಶಮಿ ಪ್ರಯುಕ್ತ ತಾವರೆಕೆರೆ ಸಮೂಹ ಸಂಪನ್ಮೂಲ ಶಿಕ್ಷಕ ಚಿಕ್ಕವೀರಯ್ಯ ಅವರ ಮನೆಯಲ್ಲಿ ಹಮ್ಮಿಕೊಂಡಿದ್ದ ಪುಸ್ತಕ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಮಾಜಕ್ಕೆ ಪುಸ್ತಕದ ಮಹತ್ವ ತಿಳಿಸುವುದು, ನೆರೆ ಹೊರೆಯವರಲ್ಲಿ ಪುಸ್ತಕ ಪ್ರೇಮ ಬಿತ್ತುವುದು ಅತ್ಯುತ್ತಮ ಸಂಸ್ಕೃತಿಯಾಗಿದೆ. ವಿಷ್ಣು ದೇವಸ್ಥಾನಕ್ಕೆ ಹೋಗುವುದು, ಶಿವನ ಗುಡಿ, ಮಾರಮ್ಮ ದೇವಾಲಯಕ್ಕೆ ನಮಿಸುವುದು ಭಕ್ತಿಯ ವಿಚಾರವಾದರೆ, ಗ್ರಂಥಾಲಯದಲ್ಲೇ ಸರ್ವ ಶಕ್ತಿಯನ್ನು ಕಂಡುಕೊಳ್ಳುವುದು ಜ್ಞಾನ ವೃದ್ಧಿಯ ಸಂಕೇತವಾಗಿದೆ ಎಂದರು. ಇಂತಹ ವಿಶೇಷ ಚಿಂತನೆಯನ್ನು ಅಳವಡಿಸಿಕೊಂಡಿರುವ ವ್ಯಕ್ತಿಗಳು ಸಮಾಜಕ್ಕೆ ಎಂದಿಗೂ ಪ್ರೇರಣೆಯಾಗಿರುತ್ತಾರೆ ಎಂದರು.
ತಾವರೆಕೆರೆ ಅಧ್ಯಾತ್ಮ ಕೇಂದ್ರ ಕಾಳಪ್ಪ ಸ್ವಾಮಿ ಮಠದ ಶ್ರೀ ರೇವಣಸಿದ್ದಯ್ಯ ಗುರುಗಳು ಮಾತನಾಡಿ ‘ನರೇಂದ್ರ ವಿವೇಕಾನಂದರಾಗಿ ಬದಲಾಗಿದ್ದು, ಭೀಮರಾವ್ ಅಂಬೇಡ್ಕರ್ ಆಗಿ ಪರಿವರ್ತನೆಯಾಗಿದ್ದು ಹಾಗೂ ಪುಟ್ಟಪ್ಪ ಕುವೆಂಪು ಆಗಿ ನಾಡಿನ ಮನ್ನಣೆ ಗಳಿಸಿದ್ದು ಪುಸ್ತಕ ಪ್ರೀತಿಯಿಂದಲೇ ಎಂದರು.
ಭಾಗವಹಿಸಿದ ಎಲ್ಲರಿಗೂ ಪುಸ್ತಕಗಳನ್ನು ನೀಡಲಾಯಿತು. ಮಹಿಳೆಯರಿಗೆ ಬಾಗಿನ ರೂಪದಲ್ಲಿ ಶಿಕ್ಷಕ ಚಿಕ್ಕವೀರಯ್ಯ ಅವರು ಪುಸ್ತಕಗಳನ್ನು ನೀಡಿದರು.
ಶಿಕ್ಷಕರಾದ ಚಿಕ್ಕವೀರಯ್ಯ, ಹೊನ್ನಗಂಗಪ್ಪ, ರೇವಣಸಿದ್ದಯ್ಯ, ರುದ್ರಮುನಿ, ಜನಸೇವಾ ಅರುಣ್, ಗಾಯಕ ಶಿವಾರ ಉಮೇಶ್, ಅಯ್ಯಪ್ಪಸ್ವಾಮಿ ಭಕ್ತ ಮಂಡಳಿ ಗಿರೀಶ್, ನಾರಾಯಣಪ್ಪ, ಸಂಗೀತಗಾರ ದೇವರಾಜ್, ದಿವ್ಯ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.