ADVERTISEMENT

ಪ್ರಮುಖ ಸಾರ್ವಜನಿಕ ಹುದ್ದೆಗಳಲ್ಲಿ ಬ್ರಾಹ್ಮಣರು ಇರಲಿ: ಸಚಿವ ದಿನೇಶ್‌ ಗುಂಡೂರಾವ್‌

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2024, 15:19 IST
Last Updated 27 ಸೆಪ್ಟೆಂಬರ್ 2024, 15:19 IST
ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ–2024’ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ಮಕ್ಕಳನ್ನು ಸನ್ಮಾನಿಸಲಾಯಿತು –ಪ್ರಜಾವಾಣಿ ಚಿತ್ರ
ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ–2024’ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ಮಕ್ಕಳನ್ನು ಸನ್ಮಾನಿಸಲಾಯಿತು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ವೈದ್ಯರು, ಎಂಜಿನಿಯರ್‌ ಹುದ್ದೆಗಳಿಗೆ ಸೀಮಿತಗೊಳ್ಳದೇ ಸಾರ್ವಜನಿಕ ಸೇವಾ ಹುದ್ದೆಗಳಲ್ಲಿಯೂ ನಮ್ಮವರೇ ಇರಬೇಕು. ಆಗ ಎಲ್ಲ ಸಮುದಾಯಗಳಿಗೆ ಸ್ಪಂದಿಸುವುದರ ಜೊತೆಗೆ ನಮ್ಮ ಸಮಾಜಕ್ಕೂ ಒಳ್ಳೆಯದು ಮಾಡಲು ಸಾಧ್ಯ’ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

ಎಸ್‌ಎಸ್‌ಎಲ್‌ಸಿಯಲ್ಲಿ ಜಿಲ್ಲಾವಾರು ಮೊದಲ ಮೂರು ಸ್ಥಾನ ಗಳಿಸಿದ ವಿಪ್ರ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಶುಕ್ರವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ‘ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ–2024’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಐಎಎಸ್‌, ಕೆಎಎಸ್‌ ಅಧಿಕಾರಿಗಳಾಗಲು ಮುಂದೆ ಬರಬೇಕು. ರಾಜಕಾರಣಕ್ಕೆ ಬರಬಾರದು ಎಂದಲ್ಲ. ಆದರೆ, ಸ್ವಲ್ಪ ಕಷ್ಟದ ಕ್ಷೇತ್ರ ಆಗಿರುವುದರಿಂದ ರಾಜಕಾರಣಕ್ಕೆ ಬರುವ ಮೊದಲು ಯೋಚಿಸಿ’ ಎಂದು ಸಲಹೆ ನೀಡಿದರು.

ADVERTISEMENT

ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್‌.ವಿ. ದೇಶಪಾಂಡೆ ಮಾತನಾಡಿ, ‘ಮಾಜಿ ಮುಖ್ಯಮಂತ್ರಿ ಗುಂಡೂರಾವ್‌ ಅವರು ಯಾವುದೇ ಅಂಜಿಕೆ ಇಲ್ಲದೇ ಬ್ರಾಹ್ಮಣರ ಬೆನ್ನು ತಟ್ಟುತ್ತಿದ್ದರು. ಈಗಿನ ರಾಜಕಾರಣಿಗಳು ಸ್ವಲ್ಪ ಹೆದರುತ್ತಾರೆ. ನನ್ನ ಕ್ಷೇತ್ರದಲ್ಲಿ ಎರಡು ಲಕ್ಷ ಮತದಾರರಿದ್ದಾರೆ. ಅದರಲ್ಲಿ 2,000 ಮಾತ್ರ ಬ್ರಾಹ್ಮಣರಾಗಿದ್ದಾರೆ. ಅಭಿಮಾನದಿಂದ ಕೆಲವರು ನನಗೆ ಮತ ಹಾಕುತ್ತಾರೆ. ಹೆಚ್ಚಿನ ಬ್ರಾಹ್ಮಣರು ಯಾವ ಪಕ್ಷಕ್ಕೆ ಹಾಕುತ್ತಾರೆ ಎಂಬುದು ಎಲ್ಲರಿಗೂ ಗೊತ್ತು. ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಕೆಲಸ ಮಾಡಿ ಎಲ್ಲ ಸಮಾಜದವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿರುವುದರಿಂದ ನಾನು ಒಂಬತ್ತು ಬಾರಿ ಶಾಸಕನಾಗಲು ಸಾಧ್ಯವಾಗಿದೆ’ ಎಂದರು.

‘ಬಡ ಬ್ರಾಹ್ಮಣ ವಿಧವೆಯರು ರಸ್ತೆಯಲ್ಲಿ ನಿಂತು ಯಾರ ಸಹಾಯವನ್ನೂ ಕೇಳಬಾರದು. ಅಂಥ ಯೋಜನೆಯನ್ನು ವಿಧವೆಯರಿಗಾಗಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ರೂಪಿಸಬೇಕು’ ಎಂದು ಸಲಹೆ ನೀಡಿದರು.

ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ ಅಧ್ಯಕ್ಷತೆ ವಹಿಸಿದ್ದರು. ಮಂಡಳಿಯ ವ್ಯವಸ್ಥಾಪಕ ನಿರ್ದೇಶಕಿ ಪೂರ್ಣಿಮಾ ಪಿ.ಐ., ಶಾಸಕ ವಿಶ್ವಾಸ್‌ ವಸಂತ್‌ ವೈದ್ಯ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್‌ ಹಾರನಹಳ್ಳಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.