ಬೆಂಗಳೂರು: ವಿದ್ಯುತ್ ಕೇಬಲ್ಗಳ ಬದಲಾವಣೆ ಮತ್ತು ರಸ್ತೆ ಅಗೆಯಲು ಅನುಮತಿ ನೀಡಲು ₹ 25,000 ಲಂಚ ಪಡೆದ ಬಿಬಿಎಂಪಿ ಪ್ರಶಾಂತ್ ನಗರ ವಾರ್ಡ್ನ ಸಹಾಯಕ ಎಂಜಿನಿಯರ್ ಪ್ರವೀಣ್ ಬಿರಾದಾರ್ ಮತ್ತು ಗ್ಯಾಂಗ್ಮನ್ ಸುರೇಶ್ ಅವರನ್ನು ಲೋಕಾಯುಕ್ತ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಶ್ರೀ ಚಕ್ರ ಎಲೆಕ್ಟ್ರಿಕಲ್ಸ್ ಎಂಬ ಖಾಸಗಿ ಕಂಪನಿಯು ವಿದ್ಯುತ್ ಕೇಬಲ್ ಬದಲಾವಣೆ ಕಾಮಗಾರಿಗೆ ರಸ್ತೆ ಅಗೆಯಲು ಅನುಮತಿ ಕೋರಿತ್ತು. ಅನುಮತಿ ನೀಡಲು ₹35,000 ಲಂಚ ನೀಡುವಂತೆ ಸಹಾಯಕ ಎಂಜಿನಿಯರ್ ಬೇಡಿಕೆ ಇಟ್ಟಿದ್ದರು. ಚೌಕಾಸಿ ನಡೆಸಿದಾಗ ₹ 25,000 ಲಂಚ ಕೊಟ್ಟರಷ್ಟೆ ಅನುಮತಿ ನೀಡುವುದಾಗಿ ಆರೋಪಿ ಹೇಳಿದ್ದರು.
ಈ ಕುರಿತು ಖಾಸಗಿ ಕಂಪನಿಯ ಎಂಜಿನಿಯರ್ ಬಿ.ಎಸ್. ರಘುನಂದನ್, ಲೋಕಾಯುಕ್ತದ ಬೆಂಗಳೂರು ನಗರ ಘಟಕಕ್ಕೆ ದೂರು ನೀಡಿದ್ದರು. ಪ್ರಶಾಂತ್ ನಗರ ಬಿಬಿಎಂಪಿ ವಾರ್ಡ್ ಕಚೇರಿಗೆ ಶುಕ್ರವಾರ ಸಂಜೆ ತೆರಳಿದ ದೂರುದಾರರು, ಸಹಾಯಕ ಎಂಜಿನಿಯರ್ ಅವರನ್ನು ಭೇಟಿ ಮಾಡಿದರು. ಪ್ರವೀಣ್ ಸೂಚನೆಯಂತೆ ಸುರೇಶ್ ಹಣ ಪಡೆದರು. ತಕ್ಷಣ ದಾಳಿಮಾಡಿದ ಲೋಕಾಯುಕ್ತ ಪೊಲೀಸರು, ಇಬ್ಬರೂ ಆರೋಪಿಗಳನ್ನು ಬಂಧಿಸಿದರು ಎಂದು ಲೋಕಾಯುಕ್ತದ ಅಧಿಕಾರಿಗಳು ತಿಳಿಸಿದ್ದಾರೆ.
ಲೋಕಾಯುಕ್ತದ ಬೆಂಗಳೂರು ನಗರ ಪೊಲೀಸ್ ಘಟಕದ ಎಸ್ಪಿ–1 ಶ್ರೀನಾಥ್ ಜೋಶಿ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಬಸವರಾಜ್ ಮಗ್ದುಂ, ಇನ್ಸ್ಪೆಕ್ಟರ್ಗಳಾದ ಕೇಶವಮೂರ್ತಿ, ಆನಂದ್, ಮಂಜುನಾಥ್ ಹೂಗಾರ್ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.