ಬೆಂಗಳೂರು: ಮಧ್ಯಂತರ ಆಯವ್ಯಯದಲ್ಲಿ ಕೈಗಾರಿಕೋದ್ಯಮಿಗಳು, ತೆರಿಗೆ ಪಾವತಿದಾರರಿಗೆ ಹೊಸತೇನೂ ಇಲ್ಲ. ರೈಲ್ವೆ, ರೈಲ್ವೆ ಕಾರಿಡಾರ್, ಮೆಟ್ರೊ ರೈಲು ಮಾರ್ಗದ ಮೂಲ ಸೌಕರ್ಯ ಅಭಿವೃದ್ಧಿಗೆ ಅನುದಾನ ಮೀಸಲಿಡಲಾಗಿದೆ. ಇದು ದೇಶದ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಹೇಳಿದೆ.
ವಿತ್ತೀಯ ಕೊರತೆಯು ಇಳಿಕೆಯಾಗಲಿದೆ ಎಂಬ ನಿರೀಕ್ಷೆ ಹೊಂದಿರುವುದು ಸ್ವಾಗತಾರ್ಹ. ಇದು ಹಣದುಬ್ಬರವನ್ನು ನಿಯಂತ್ರಿಸುತ್ತದೆ ಎಂದು ಕಾಸಿಯಾ ಅಧ್ಯಕ್ಷ ಸಿ.ಎ. ಶಶಿಧರ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.
ಹೂಡಿಕೆಯ ಅಗತ್ಯಗಳನ್ನು ಪೂರೈಸುವ ಮೂಲಕ ಜಾಗತಿಕ ಮಟ್ಟದಲ್ಲಿ ಸ್ಫರ್ಧಿಸಲು ಎಂಎಸ್ಎಂಇಗಳಿಗೆ ತರಬೇತಿ ನೀಡುವುದನ್ನು ಹೊರತುಪಡಿಸಿದರೆ ಕೈಗಾರಿಕೆಗಳಿಗೆ ವಿಶೇಷ ಒತ್ತು ನೀಡಿಲ್ಲ ಎಂದು ಹೇಳಿದ್ದಾರೆ.
ಸಾರ್ವಜನಿಕ, ಖಾಸಗಿ ಹೂಡಿಕೆ ಮಾದರಿ ಮೂಲಕ ಅತಿಸಣ್ಣ ಆಹಾರ ಸಂಸ್ಕರಣಾ ಯೋಜನೆಗೆ ಒತ್ತು ನೀಡಲಾಗಿದೆ. ಇದರಿಂದ ದೇಶದ ಕೃಷಿಗೆ ಮಾತ್ರವಲ್ಲದೆ ಕೈಗಾರಿಕೆಗಳಿಗೂ ಉತ್ತೇಜನ ಸಿಗಲಿದೆ ಎಂದಿದ್ದಾರೆ.
2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣದ ದೃಷ್ಟಿಕೋನ ಹೊಂದಿರುವುದು ಶ್ಲಾಘನೀಯ. ಅಧಿಕಾರಕ್ಕೆ ಬರುವ ಹೊಸ ಸರ್ಕಾರವು ಜುಲೈನಲ್ಲಿ ಮಂಡಿಸಲಿರುವ ಪೂರ್ಣ ಪ್ರಮಾಣದ ಬಜೆಟ್ನಲ್ಲಿ ಎಂಎಸ್ಎಂಇಗಳ ಅಗತ್ಯ ಪೂರೈಸಲಿದೆ ಎಂಬ ಆಶಾವಾದ ಹೊಂದಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.