ADVERTISEMENT

ಬೆಂಗಳೂರು: ಅಪಾಯದ ಸ್ಥಿತಿಯಲ್ಲಿರುವ ಮರಗಳ ತೆರವಿಗೆ ಅಭಿಯಾನ

ಅರಣ್ಯ ವಿಭಾಗದಿಂದ ಕಾರ್ಯಾಚರಣೆ, ಬಿಬಿಎಂಪಿಯೊಂದಿಗೆ ಬೆಸ್ಕಾಂ ಸಹಯೋಗ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2024, 15:36 IST
Last Updated 20 ಸೆಪ್ಟೆಂಬರ್ 2024, 15:36 IST
ನಗರದಲ್ಲಿ ಅಪಾಯ ಸ್ಥಿತಿಯಲ್ಲಿರುವ ಮರ, ಕೊಂಬೆಗಳನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ಜಯನಗರದಲ್ಲಿ ಶುಕ್ರವಾರ ಚಾಲನೆ ನೀಡಿದರು.
ನಗರದಲ್ಲಿ ಅಪಾಯ ಸ್ಥಿತಿಯಲ್ಲಿರುವ ಮರ, ಕೊಂಬೆಗಳನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ಜಯನಗರದಲ್ಲಿ ಶುಕ್ರವಾರ ಚಾಲನೆ ನೀಡಿದರು.   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಅಪಾಯ ಸ್ಥಿತಿಯಲ್ಲಿರುವ ಮರ, ಒಣಗಿದ ಮರ ಹಾಗೂ ಮರದ ರೆಂಬೆ, ಕೊಂಬೆಗಳು, ವಿದ್ಯುತ್‌ ಕಂಬಗಳನ್ನು ಆವರಿಸಿರುವ ಮರಗಳ ತೆರವು ಕಾರ್ಯಾಚರಣೆ ಅಭಿಯಾನವನ್ನು ಆರಂಭಿಸಲಾಗಿದೆ.

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ಜಯನಗರ 2ನೇ ಬ್ಲಾಕ್‌ನಲ್ಲಿ ಅಭಿಯಾನಕ್ಕೆ ಶುಕ್ರವಾರ ಚಾಲನೆ ನೀಡಿದರು. 

ಪಾಲಿಕೆ ವ್ಯಾಪ್ತಿಯಲ್ಲಿ ಅರಣ್ಯ ವಿಭಾಗದಿಂದ ನಿರಂತರವಾಗಿ ಅಪಾಯ ಸ್ಥಿತಿಯಲ್ಲಿರುವ ಮರ ಕಟಾವು ಮಾಡಲಾಗುತ್ತಿದೆ. ಮಳೆಗಾಲದಲ್ಲಿ ಬಿರುಗಾಳಿಯಿಂದಾಗಿ ಮರಗಳು ಬೀಳುತ್ತವೆ. ಅವುಗಳ ತೆರವಿಗೆ ಗುತ್ತಿಗೆ ಆಧಾರದ ಮೇಲೆ ಹೆಚ್ಚುವರಿಯಾಗಿ ತೆರವು ಕಾರ್ಯಾಚರಣೆ ತಂಡಗಳನ್ನು ನಿಯೋಜಿಸಲಾಗಿದೆ. ಸಾರ್ವಜನಿಕರ ಓಡಾಟ ಹಾಗೂ ವಾಹನ ದಟ್ಟಣೆ ಹೆಚ್ಚಿರುವಂತಹ ರಸ್ತೆಗಳಲ್ಲಿ ಮರದ ರೆಂಬೆ, ಕೊಂಬೆಗಳನ್ನು ರಾತ್ರಿ ವೇಳೆ ಕಟಾವು ಮಾಡಿ, ಕೂಡಲೇ ಡಂಪಿಂಗ್ ಯಾರ್ಡ್‌ಗೆ ವಿಲೇವಾರಿ ಮಾಡಲಾಗುವುದು ಎಂದು ತುಷಾರ್‌ ಗಿರಿನಾಥ್ ತಿಳಿಸಿದರು.

ADVERTISEMENT

ಮರದ ರೆಂಬೆ, ಕೊಂಬೆಗಳ ತೆರವು ಕಾರ್ಯಾಚರಣೆ ನಿರಂತರವಾಗಿರುತ್ತದೆ. ಪಾಲಿಕೆ ಹಾಗೂ ಬೆಸ್ಕಾಂ ಸೇರಿ ವಿದ್ಯುತ್ ತಂತಿಗಳಿಗೆ ತಗಲುವ ರೆಂಬೆಗಳನ್ನು ತೆರವು ಮಾಡುವ ಅಭಿಯಾನವನ್ನು ಶುಕ್ರವಾರದಿಂದ 10 ದಿನ ನಡೆಸಲಾಗುವುದು ಎಂದರು.

ಸಮೀಕ್ಷೆ: ಪ್ರಮುಖ ರಸ್ತೆಗಳಲ್ಲಿ ಸಮೀಕ್ಷೆ ಮಾಡಿ ನಂತರ ಅಪಾಯ ಸ್ಥಿತಿಯಲ್ಲಿರುವ ಮರಗಳ ತೆರವು ಕೆಲಸ ಮಾಡಲಾಗುತ್ತಿದೆ. ನಗರದಲ್ಲಿ ಜುಲೈನಿಂದ ಈವರೆಗೆ ಒಣಗಿದ/ಅಪಾಯ ಸ್ಥಿತಿಯಲ್ಲಿರುವ 477 ಮರ ಹಾಗೂ 592 ಕೊಂಬೆಗಳನ್ನು ತೆರವುಗೊಳಿಸಲಾಗಿದೆ. ಅಲ್ಲದೆ ನಾಗರಿಕರಿಂದ ಬಂದಿರುವ ದೂರುಗಳನ್ನು ಆಧರಿಸಿ ಮಳೆ ಗಾಳಿಗೆ ಬಿದ್ದಂತಹ ಸುಮಾರು 1,371 ಮರಗಳು ಹಾಗೂ 3,700 ರೆಂಬೆ-ಕೊಂಬೆಗಳನ್ನು ತೆರವುಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ನಾಗರಿಕರು ದೂರು ನೀಡಬಹುದು
ನಾಗರಿಕರು ತಮ್ಮ ಸುತ್ತಮುತ್ತ ಪ್ರದೇಶಗಳಲ್ಲಿ ಒಣಗಿರುವ ಅಪಾಯ ಸ್ಥಿತಿಯಲ್ಲಿರುವ ಮರ ಹಾಗೂ ಮರದ ರೆಂಬೆ ಕೊಂಬೆಗಳು ಕಂಡುಬಂದಲ್ಲಿ ಗಾಳಿ/ಮಳೆಗೆ ಬಿದ್ದಿರುವ ಮರಗಳನ್ನು ತೆರವುಗೊಳಿಸಲು ಬಿಬಿಎಂಪಿ  ಸಹಾಯವಾಣಿ 1533 ಅಥವಾ 080-22221188 / 08022660000ಗೆ ಕರೆ ಮಾಡಿ ದೂರು ನೀಡಬಹುದು.
ಪಾದಚಾರಿ ಮಾರ್ಗ ಒತ್ತುವರಿ ತೆರವಿಗೆ ಸೂಚನೆ
ಜಯನಗರದಲ್ಲಿ ಪಾದಚಾರಿ ಮಾರ್ಗದಲ್ಲಿ ಅನಧಿಕೃತ ಕೇಬಲ್‌ಗಳನ್ನು ತೆರವುಗೊಳಿಸಲು ಮುಖ್ಯ ಆಯುಕ್ತರು ಸೂಚಿಸಿದರು. ಭಾರತ್ ಟಿವಿಎಸ್ ಸಂಸ್ಥೆ ಸಂಪೂರ್ಣ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡಿದ್ದನ್ನು ಗಮನಿಸಿ ಅವರಿಗೆ ದಂಡ ವಿಧಿಸಿ ಉದ್ದಿಮೆ ಪರವಾನಗಿ ಅಮಾನತು ಮಾಡಲು ಹೇಳಿದರು. ಯಡಿಯೂರು ವಾರ್ಡ್ 16ನೇ ಅಡ್ಡರಸ್ತೆಯಲ್ಲಿ ಬೆಸ್ಕಾಂ ಅಳವಡಿಸಿರುವ ಟ್ರಾನ್ಸ್‌ಫಾರ್ಮರ್‌ಗೆ ಸಂಪರ್ಕ ಹೊಂದಿರುವ ಕೇಬಲ್‌ಗಳು ಚರಂಡಿಗೆ ಅಡ್ಡವಾಗಿದ್ದನ್ನು ಗಮನಿಸಿ ಅದನ್ನು ತೆರವುಗೊಳಿಸಲು ಸೂಚಿಸಿದರು. ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಬಳಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಡೆಸಬೇಕು. ಮತ್ತೆ-ಮತ್ತೆ ಒತ್ತುವರಿಯಾಗದಂತೆ  ನಿತ್ಯ ಪರಿಶೀಲನೆ ನಡೆಸಬೇಕು ಎಂದು ಅಧಿಕಾರಿಗಳಿಗೆ ಹೇಳಿದರು. ರಸ್ತೆ ಹಾಗೂ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುವುದು ಕಾನೂನುಬಾಹಿರವಾಗಿದ್ದು ಅದನ್ನು ತೆರವುಗೊಳಿಸಲಾಗುತ್ತದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.