ಬೊಮ್ಮನಹಳ್ಳಿ: ಒಕ್ಕೂಟದ ತತ್ವಕ್ಕೆ ವಿರುದ್ಧವಾಗಿ ರಾಜ್ಯ ಸರ್ಕಾರಗಳ ಆದಾಯದ ಮೂಲಗಳನ್ನು ಮುಚ್ಚುತ್ತಿರುವ ಕೇಂದ್ರ ಸರ್ಕಾರ, ತನಗೆ ವಿರುದ್ಧವಾದ ಸರ್ಕಾರಗಳ ಮೇಲೆ ದ್ವೇಷ ಸಾಧಿಸುತ್ತಿದೆʼ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ.ಪ್ರಕಾಶ್ ಆರೋಪಿಸಿದರು.
ಭಾನುವಾರ ಮೈಕೊ ಬಡಾವಣೆಯಲ್ಲಿ ನಡೆದ ಸಿಪಿಎಂನ ಮಡಿವಾಳ ವಲಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
‘ದೇಶದಲ್ಲಿ ಜಿಎಸ್ಟಿ ಜಾರಿ ಆದ ನಂತರ ಬಿಜೆಪಿಯೇತರ ರಾಜ್ಯ ಸರ್ಕಾರಗಳಿಗೆ ಜಿಎಸ್ಟಿ ಪಾಲನ್ನು ನಿರಾಕರಿಸುವುದು ಮಾತ್ರವಲ್ಲದೆ, ಸೆಸ್ ಸಂಗ್ರಹದ ಪಾಲು ಪೂರ್ತಿಯಾಗಿ ಕೇಂದ್ರ ಸರ್ಕಾರಕ್ಕೆ ಸೇರುವಂತೆ ಕಾಯ್ದೆಗೆ ತಿದ್ದುಪಡಿ ಮಾಡಿದೆ. ಈ ಮೂಲಕ ರಾಜ್ಯ ಸರ್ಕಾರಗಳ ಕತ್ತು ಹಿಸುಕುವ ಕೆಲಸ ಮಾಡುತ್ತಿದೆʼ ಎಂದರು.
‘ದುರಾದೃಷ್ಟ ಎಂದರೆ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರವೂ ಮೋದಿ ಸರ್ಕಾರದ ಜನ ವಿರೋಧಿ, ಕಾರ್ಪೋರೇಟ್ ಪ್ರಣೀತ ನೀತಿಗಳನ್ನೇ ಅನುಸರಿಸುತ್ತಿದೆ. ಕಾಂಗ್ರೆಸ್ ತನ್ನ ಮೂಲ ಆರ್ಥಿಕ ನೀತಿಗಳನ್ನು ಮುಂದುವರಿಸುತ್ತಿರುವುದರ ಸಂಕೇತʼ ಎಂದು ದೂರಿದರು.
ಸಿಪಿಎಂ ಬೆಂಗಳೂರು ದಕ್ಷಿಣ ಜಿಲ್ಲಾ ಕಾರ್ಯದರ್ಶಿ ಬಿ.ಎನ್.ಮಂಜುನಾಥ್ ಮೆಟ್ರೊ ರೈಲು ಪ್ರಯಾಣ ದರಗಳನ್ನು ಹೆಚ್ಚಿಸುವ ಪ್ರಸ್ತಾಪವನ್ನು ಖಂಡಿಸಿದರು.
ಸ್ಥಳೀಯ ಮುಖಂಡರಾದ ಎನ್.ದಯಾನಂದ, ಧರ್ಮೇಗೌಡ, ಅಬ್ದುಲ್ ಗಫೂರ್, ನಿತಿನ್ ಇದ್ದರು. ಸಿಪಿಎಂನ ಹಿರಿಯ ಮುಖಂಡ ಸಿ.ಜಗದೀಶ್ ಅಧ್ಯಕ್ಷತೆ ವಹಿಸಿದ್ದರು.
ಎನ್.ದಯಾನಂದ ಆಯ್ಕೆ:
ಸಮ್ಮೇಳನದಲ್ಲಿ ಮುಂದಿನ ವರ್ಷದ ಅವಧಿಗೆ ಎನ್.ದಯಾನಂದ ಅವರು ಸಿಪಿಎಂ ಮಡಿವಾಳ ವಲಯದ ಕಾರ್ಯದರ್ಶಿಯಾಗಿ ಸರ್ವಾನುಮತದಿಂದ ಆಯ್ಕೆ ಆಗಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.