ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಿಡಿಎ ಬಡಾವಣೆಯಲ್ಲಿ ಹಾದು ಹೋಗುವ ಮೈಸೂರು ರಸ್ತೆ–ಮಾಗಡಿ ರಸ್ತೆ ಸಂಪರ್ಕಿಸುವ ಎಂಎಆರ್ ರಸ್ತೆಯಲ್ಲಿ ಚಲ್ಲಘಟ್ಟ ಬಳಿ ರೈಲ್ವೆ ಕೆಳ ಸೇತುವೆ (ಆರ್ಯುಬಿ) ಕಾಮಗಾರಿ ಆರಂಭಗೊಂಡಿದೆ.
ಕೆಂಗೇರಿ ಮತ್ತು ಹೆಜ್ಜಾಲ ರೈಲು ನಿಲ್ದಾಣಗಳ ನಡುವೆ ಬರುವ ಈ ಕೆಳ ಸೇತುವೆಯು ಮೆಟ್ರೊ ನಿರ್ಮಿಸುತ್ತಿರುವ ಸುರಂಗ ಮಾರ್ಗವನ್ನು ಸಂಪರ್ಕಿಸಲಿದೆ. ಈ ಕಾಮಗಾರಿಗೆ ನೈರುತ್ಯ ರೈಲ್ವೆಯಿಂದ ಬಿಡಿಎ ಅನುಮತಿ ಪಡೆದುಕೊಂಡಿದೆ.
ಹೊಸದಾಗಿ 10.7 ಕಿ.ಮೀ. ಮೇಜರ್ ಆರ್ಟೀರಿಯರ್ ರೋಡ್ (ಎಂಎಆರ್) ನಿರ್ಮಾಣಗೊಳ್ಳಲಿದ್ದು, ಅದರ ಭಾಗವಾಗಿ ₹ 39 ಕೋಟಿ ವೆಚ್ಚದಲ್ಲಿ ಬಿಡಿಎ ಆರ್ಯುಬಿ ನಿರ್ಮಿಸುತ್ತಿದೆ. ಎರಡೂ ಬದಿಗಳಲ್ಲಿ ಸರ್ವಿಸ್ ರಸ್ತೆ ಮತ್ತು ತಡೆಗೋಡೆಗಳ ಸಹಿತ ನಿರ್ಮಾಣಗೊಳ್ಳುತ್ತಿರುವ ಈ ಕಾಮಗಾರಿ ಆರು ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.
ನಿಧಾನಗತಿ:
ಆರು ಪಥದ ಈ ರಸ್ತೆಗೆ 321 ಎಕರೆ ಜಮೀನು ಸ್ವಾಧೀನವಾಗಬೇಕಿತ್ತು. ಹಲವರು ನ್ಯಾಯಾಲಯದಲ್ಲಿ ವ್ಯಾಜ್ಯ ಹೂಡಿದ್ದರಿಂದ ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗಿತ್ತು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಯೋಜನೆ ಪರಿಶೀಲನೆ ನಡೆಸಿ ಕೆಲವು ಅಡೆತಡೆಗಳನ್ನು ತೆರವುಗೊಳಿಸಿದ್ದರು. ಸೂಳಿಕೆರೆಯಲ್ಲಿ ಬಿಡಿಎಗೆ ಸುಮಾರು ನಾಲ್ಕು ಎಕರೆ ಅರಣ್ಯ ಭೂಮಿ ಅಗತ್ಯವಿದೆ. ಮುಂದಿನ ತಿಂಗಳಲ್ಲಿ ಸ್ವಾಧೀನ ಪ್ರಕ್ರಿಯೆ ಆರಂಭವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಚಲ್ಲಘಟ್ಟದಿಂದ ತಾವರಕೆರೆವರೆಗಿನ ಸುಮಾರು ನಾಲ್ಕು ಕಿ.ಮೀ ರಸ್ತೆ ಕಾಮಗಾರಿ ಮುಂದಿನ 8 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಕೆಲವು ವ್ಯಾಜ್ಯಗಳು ಇತ್ಯರ್ಥವಾಗಿದ್ದು, ಮಾಚೋಹಳ್ಳಿ ಕೈಗಾರಿಕಾ ಜಮೀನು ವಿವಾದ ಸಹಿತ ಹಲವು ಕಡೆಗಳ ಜಮೀನಿಗೆ ಸಂಬಂಧಿಸಿದ ದಾವೆಗಳು ನ್ಯಾಯಾಲಯದಲ್ಲಿವೆ. ಅವೆಲ್ಲ ಇತ್ಯರ್ಥವಾದರೆ ಕಾಮಗಾರಿ ಚುರುಕುಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.