ADVERTISEMENT

ಮಕ್ಕಳ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ: ಲೂಕೋಸ್‌ ವಲ್ಲತ್ತರೈ

​ಪ್ರಜಾವಾಣಿ ವಾರ್ತೆ
Published 9 ಜುಲೈ 2024, 15:29 IST
Last Updated 9 ಜುಲೈ 2024, 15:29 IST
‘ಮಕ್ಕಳ ಹಕ್ಕುಗಳು, ಕಾನೂನು ಮತ್ತು ರಕ್ಷಣಾ ವ್ಯವಸ್ಥೆ’ಯ ಕುರಿತು ಕಾರ್ಯಾಗಾರಕ್ಕೆ ಲೂಕೋಸ್‌ ವಲ್ಲತ್ತರೈ ಅವರು ಮಂಗಳವಾರ ಚಾಲನೆ ನೀಡಿದರು. ಎನ್.ಎ. ವಾಸುದೇವ ಶರ್ಮಾ, ಕೋಸಿ ಮ್ಯಾಥ್ಯೂವ್‌, ಸರಸ್ವತಿ, ಎಂ. ವೆಂಕಟೇಶ್ ಭಾಗವಹಿಸಿದ್ದರು.
‘ಮಕ್ಕಳ ಹಕ್ಕುಗಳು, ಕಾನೂನು ಮತ್ತು ರಕ್ಷಣಾ ವ್ಯವಸ್ಥೆ’ಯ ಕುರಿತು ಕಾರ್ಯಾಗಾರಕ್ಕೆ ಲೂಕೋಸ್‌ ವಲ್ಲತ್ತರೈ ಅವರು ಮಂಗಳವಾರ ಚಾಲನೆ ನೀಡಿದರು. ಎನ್.ಎ. ವಾಸುದೇವ ಶರ್ಮಾ, ಕೋಸಿ ಮ್ಯಾಥ್ಯೂವ್‌, ಸರಸ್ವತಿ, ಎಂ. ವೆಂಕಟೇಶ್ ಭಾಗವಹಿಸಿದ್ದರು.   

ಬೆಂಗಳೂರು: ‘ನಮ್ಮ ದೇಶದಲ್ಲಿ ಮಕ್ಕಳ ಹಕ್ಕುಗಳ ಪರಿಸ್ಥಿತಿ ಚಿಂತಾಜನಕವಾಗಿದೆ. ಮಕ್ಕಳ ಮೇಲೆ ನಾನಾ ರೀತಿಯ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಲೇ ಇವೆ’ ಎಂದು ನಿವೃತ್ತ ಐಎಎಸ್ ಅಧಿಕಾರಿ ಲೂಕೋಸ್‌ ವಲ್ಲತ್ತರೈ ಹೇಳಿದರು.

ಬಾಲಕಾರ್ಮಿಕ ಪದ್ಧತಿ ವಿರೋಧಿ ಆಂದೋಲನ, ಮಕ್ಕಳ ಹಕ್ಕುಗಳ ನಿಗಾ ಕೇಂದ್ರದ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ‘ಮಕ್ಕಳ ಹಕ್ಕುಗಳು, ಕಾನೂನು ಮತ್ತು ರಕ್ಷಣಾ ವ್ಯವಸ್ಥೆ’ಯ ಕುರಿತು ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಮಕ್ಕಳನ್ನು ದೌರ್ಜನ್ಯದಿಂದ ರಕ್ಷಿಸುವ ನಿಟ್ಟಿನಲ್ಲಿ ಸರ್ಕಾರ ಮತ್ತು ಸಂಘ–ಸಂಸ್ಥೆಗಳು ಸಮನ್ವಯದಿಂದ ಕೆಲಸ ಮಾಡಬೇಕಿದೆ’ ಎಂದರು.

‘ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ನಿಯಂತ್ರಿಸಲು ಇರುವ ಕಾನೂನುಗಳು ಸಹ ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ಬರುತ್ತಿಲ್ಲ. ಸಂಬಂಧಪಟ್ಟ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡುತ್ತಿಲ್ಲ. ಇದು ಸಮುದಾಯದ ಅಭಿವೃದ್ಧಿ ಮತ್ತು ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ದೊಡ್ಡ ಸವಾಲಾಗಿದೆ’ ಎಂದು ಹೇಳಿದರು.

ADVERTISEMENT

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಎಂ. ವೆಂಕಟೇಶ್ ಮಾತನಾಡಿ, ‘ದೇಶದಲ್ಲಿ ಬಾಲಕಾರ್ಮಿಕ ಮಕ್ಕಳ ಸ್ಥಿತಗತಿ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಬಾಲ್ಯ ವಿವಾಹ, ಹೆಚ್ಚುತ್ತಿರುವ ಭ್ರೂಣ ಹತ್ಯೆಗಳಂತಹ ಸಾಮಾಜಿಕ ಪಿಡುಗುಗಳ ವಿರುದ್ಧ ಸರ್ಕಾರ ಮತ್ತು ಸಂಘ–ಸಂಸ್ಥೆಗಳ ಸಹಯೋಗದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಆ ಮೂಲಕ ಮಕ್ಕಳ ಮೇಲಿನ ದೌರ್ಜನ್ಯವನ್ನು ನಿಯಂತ್ರಿಸಬೇಕಿದೆ’ ಎಂದರು.

ಸಾಮಾಜಿಕ ಅಭಿವೃದ್ಧಿಯ ವಿವಿಧ ಆಯಾಮಗಳಲ್ಲಿ ಭಾರತದ ಸಂವಿಧಾನದ ಆಶಯಗಳು, ಸುಸ್ಥಿರ ಅಭಿವೃದ್ಧಿಯ ಗುರಿಗಳು ಮತ್ತು ವಿಶ್ವ ಮಕ್ಕಳ ಹಕ್ಕುಗಳ ಒಡಂಬಡಿಕೆ, ಮಕ್ಕಳ ಹಕ್ಕುಗಳು ಎಂಬ ವಿಷಯಗಳ ಕುರಿತು ಕರ್ನಾಟಕ ಮಕ್ಕಳ ಹಕ್ಕು ನಿಗಾ ಕೇಂದ್ರದ ರಾಜ್ಯ ಸಂಚಾಲಕ ಎನ್.ಎ. ವಾಸುದೇವ ಶರ್ಮಾ ಮಾತನಾಡಿದರು.

ಗ್ರಾಮೀಣ ಶಿಕ್ಷಣ ಹಾಗೂ ಆರೋಗ್ಯ ಸಂಸ್ಥೆಯ ಅಧ್ಯಕ್ಷ ಕೋಸಿ ಮ್ಯಾಥ್ಯೂವ್‌, ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ, ಬಾಲಕಾರ್ಮಿಕ ಪದ್ಧತಿ ವಿರೋಧಿ ಆಂದೋಲನದ ರಾಜ್ಯ ಸಂಚಾಲಕಿ ಸರಸ್ವತಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.