ಕೆಂಗೇರಿ: ‘ಪರಿಸರಕ್ಕೆ ಹಾನಿಯಾಗದಂತೆ ರಕ್ಷಿಸುವುದು ಹಾಗೂ ಸ್ವಚ್ಛ ಪರಿಸರವನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವುದು ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿಯಾಗಿದೆ‘ ಎಂದು ಅದಮ್ಯ ಚೇತನ ಟ್ರಸ್ಟ್ ಅಧ್ಯಕ್ಷೆ ಹಾಗೂ ವ್ಯವಸ್ಥಾಪಕ ಟ್ರಸ್ಟಿ ತೇಜಸ್ವಿನಿ ಅನಂತಕುಮಾರ್ ಹೇಳಿದರು.
ಉಲ್ಲಾಳು ವಾರ್ಡ್ನ ಮಿನಿಗಾಂಧಿನಗರದ ಬಳಿಯ ಹೊಸಕೆರೆ ಆವರಣದಲ್ಲಿ ಅದಮ್ಯ ಚೇತನ ಟ್ರಸ್ಟ್ ಹಾಗೂ ವಿವಿಧ ಶಾಲೆಗಳ ಮಕ್ಕಳ ಸಹಕಾರದೊಂದಿಗೆ 439ನೇ ಹಸಿರು ಭಾನುವಾರದ ಅಂಗವಾಗಿ ವಿವಿಧ ಬಗೆಯ ಸಸಿಗಳನ್ನು ನೆಟ್ಟು ಅವರು ಮಾತನಾಡಿದರು.
ಅದಮ್ಯ ಚೇತನ ಟ್ರಸ್ಟ್ ವತಿಯಿಂದ ಪ್ರತಿ ಭಾನುವಾರ ‘ಹಸಿರು ಭಾನುವಾರ’ ಎಂಬ ಕಾರ್ಯಕ್ರಮದಡಿ, ನಗರದ ಹಲವು ಭಾಗಗಳಲ್ಲಿ ಸಸಿನೆಟ್ಟು ಪೋಷಿಸಲಾಗುತ್ತಿದೆ. ಪರಿಸರ ಸಂರಕ್ಷಣೆಯ ಮಹತ್ವದ ಬಗ್ಗೆ ಮಕ್ಕಳಲ್ಲಿ ಹಾಗೂ ಯುವಕರಲ್ಲಿ ಅರಿವು ಮೂಡಿಸುವ ಕೆಲಸವನ್ನು ಮಾಡಿಕೊಂಡು ಬರಲಾಗುತ್ತಿದೆ ಎಂದರು.
ವಳಗೇರಹಳ್ಳಿ ನಿವಾಸಿಗಳ ಒಕ್ಕೂಟದ ಅಧ್ಯಕ್ಷ ಎನ್. ಕದರಪ್ಪ ಮಾತನಾಡಿ, ಪರಿಸರ ರಕ್ಷಣೆ ಕಾರ್ಯ ಕೇವಲ ಕಡತಗಳಿಗೆ ಸೀಮಿತಗೊಂಡಿದೆ. ಮಾನವನ ಅಪರಿಮಿತ ದಾಹದಿಂದ ಮಲಿನ ಗೊಂಡಿರುವ ಪರಿಸರವನ್ನು ಸಂರಕ್ಷಿಸಿಕೊಳ್ಳುವ ಅವಕಾಶ ಈಗಲೂ ಇದೆ. ಪರಿಸರ ಸ್ನೇಹಿ ಕ್ರಮಗಳನ್ನು ಅನುಸರಿಸುವ ಮೂಲಕ ಸಮತೋಲಿತ ಪ್ರಕೃತಿಯನ್ನು ಕಾಪಾಡಿಕೊಳ್ಳಬೇಕಿದೆ ಎಂದರು.
ಆರ್.ಎಸ್.ಎಸ್ ಪರಿಸರ ಗತಿ ವಿಧಿ ವಿಭಾಗದ ಜಯರಾಮ್, ನಾಗೇಶ್ ಹೆಗೆಡೆ, ಹಸಿರು ಭಾನುವಾರದ ಆಯೋಜಕ ಪ್ರಕಾಶ್, ರಾಮಮೂರ್ತಿ ಸೇರಿದಂತೆ ವಿವಿಧ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಸಸಿ ನೆಟ್ಟು ನೀರುಣಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.