ಬೆಂಗಳೂರು: ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯಲ್ಲಿ (ಐಐಎಚ್ಆರ್) ಇದೇ 25ರಿಂದ 27ವರೆಗೆ ತೋಟಗಾರಿಕೆಯಲ್ಲಿ ಸಸ್ಯ ಸಂರಕ್ಷಣೆ ಕುರಿತು ಅಂತರರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ.
ಸಸ್ಯ ಸಂರಕ್ಷಣಾ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಐಐಎಚ್ಆರ್ನ, ಅಸೋಸಿಯೇಷನ್ ಫಾರ್ ಅಡ್ವಾನ್ಸ್ಮೆಂಟ್ ಆಫ್ ಪೆಸ್ಟ್ ಮ್ಯಾನೇಜ್ಮೆಂಟ್ ಇನ್ ಹಾರ್ಟಿಕಲ್ಚರಲ್ ಎಕೊಸಿಸ್ಟಂ (ಎಎಪಿಎಂಎಚ್ಇ) ಸಂಘಕ್ಕೆ 30 ವರ್ಷ ತುಂಬಿರುವ ಸಂದರ್ಭದಲ್ಲಿ ಈ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ. ಐಐಎಚ್ಆರ್ ಹಾಗೂ ಎಎಪಿಎಂಎಚ್ಇ ಸಹಯೋಗದಲ್ಲಿ ಸಮ್ಮೇಳನ ನಡೆಯುತ್ತಿದೆ.
ದೇಶದಾದ್ಯಂತ ಸಸ್ಯ ಸಂರಕ್ಷಣಾ ಕ್ಷೇತ್ರದಲ್ಲಿ ಸಂಶೋಧನೆಯಲ್ಲಿ ತೊಡಗಿರುವ ವಿಜ್ಞಾನಿಗಳು ಸೇರಿದಂತೆ, 250ಕ್ಕೂ ಹೆಚ್ಚು ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಅಮೆರಿಕ, ಬ್ರಿಟನ್ ಮತ್ತು ಮೆಕ್ಸಿಕೊ ದೇಶಗಳ ಕೆಲವು ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
ಕೀಟ ನಿರ್ವಹಣೆಗೆ ಡಿಜಿಟಲ್ ಮತ್ತು ಯಾಂತ್ರಿಕ ಬುದ್ಧಿಮತ್ತೆ(ಎಐ) ಉಪಕರಣಗಳ ಬಳಕೆ, ಜೀನೋಮ್ ಎಡಿಟಿಂಗ್, ಸಸ್ಯಗಳನ್ನು ಕಾಡುವ ಆಕ್ರಮಣಕಾರಿ ಕೀಟಗಳು, ಹವಾಮಾನ ಬದಲಾವಣೆಯ ಪರಿಣಾಮ ಮತ್ತು ಕೀಟ ಬಾಧೆ ಸೇರಿದಂತೆ ಸಸ್ಯ ಸಂಕ್ಷಣೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆ ಮತ್ತು ಹೊಸ ಸಮಸ್ಯೆಗಳ ಕುರಿತು ಸಮ್ಮೇಳನದಲ್ಲಿ ಚರ್ಚಿಸಲಾಗುವುದು.
ಬೆಳೆ ಸಂರಕ್ಷಣೆ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ವಿಜ್ಞಾನಿಗಳಿಗೆ ಪ್ರಶಸ್ತಿ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ಪಿಎಚ್.ಡಿ. ಪ್ರದಾನ ಮಾಡಲಾಗುವುದು ಎಂದು ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ವಿ. ಶ್ರೀಧರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.