ADVERTISEMENT

‘ವ್ಯಕ್ತಿಯಿಂದಲ್ಲ; ಸಂವಿಧಾನದಿಂದ ದೇಶ ವಿಶ್ವಗುರು’: ನಂದಿನಿ ಸುಂದರ್‌

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2024, 20:32 IST
Last Updated 24 ಫೆಬ್ರುವರಿ 2024, 20:32 IST
ಗೋಷ್ಠಿಯಲ್ಲಿ ಭಾಗವಹಿಸಿದ್ದ ನಂದಿನಿ ಸುಂದರ್ ಮತ್ತು ಗೋಪಾಲ್‌ ಗುರು –ಪ್ರಜಾವಾಣಿ ಚಿತ್ರ
ಗೋಷ್ಠಿಯಲ್ಲಿ ಭಾಗವಹಿಸಿದ್ದ ನಂದಿನಿ ಸುಂದರ್ ಮತ್ತು ಗೋಪಾಲ್‌ ಗುರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಪ್ರಜಾಪ್ರಭುತ್ವ ಮತ್ತು ಸಂವಿಧಾನದಿಂದಲೇ ನಮ್ಮ ದೇಶ ಇಂದು ವಿಶ್ವಗುರು ಆಗಿದೆ. ಅದು ಯಾವುದೇ ಒಬ್ಬ ವ್ಯಕ್ತಿ, ಧರ್ಮ, ಮಸೀದಿ ಅಥವಾ ಮಂದಿರದಿಂದಲ್ಲ’ ಎಂದು ದೆಹಲಿ ಸ್ಕೂಲ್‌ ಆಫ್‌ ಎಕನಾಮಿಕ್ಸ್‌ನ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ನಂದಿನಿ ಸುಂದರ್‌ ಹೇಳಿದರು. 

ಸಂವಿಧಾನ ಮತ್ತು ರಾಷ್ಟ್ರೀಯ ಏಕತೆ ಸಮಾವೇಶದಲ್ಲಿ ಶನಿವಾರ ನಡೆದ ‘21ನೇ ಶತಮಾನದಲ್ಲಿ ಸಾಂವಿಧಾನಿಕ ಮತ್ತು ಪ್ರಜಾಪ್ರಭುತ್ವ’ ಎಂಬ ಗೋಷ್ಠಿಯಲ್ಲಿ ಮಾತನಾಡಿದ ಅವರು, ಭಗವದ್ಗೀತೆ ಅಥವಾ ಕುರಾನ್‌ನಿಂದ ನಮ್ಮ ದೇಶ ನಡೆಯುತ್ತಿಲ್ಲ. ಭೀಮನ ಸಂವಿಧಾನದಿಂದ ನಮ್ಮ ದೇಶ ನಡೆಯುತ್ತಿದೆ ಎಂದು ಪ್ರತಿ‍‍ಪಾದಿಸಿದರು. 

‘21ನೇ ಶತಮಾನದಲ್ಲಿ ಸಂವಿಧಾನವನ್ನು ಮತ್ತೊಮ್ಮೆ ಅವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ಸಂವಿಧಾನವು ಕಾನೂನು ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಅದನ್ನು ದೇಶದ ಪ್ರತಿಯೊಬ್ಬ ಪ್ರಜೆ ಅಧ್ಯಯನ ಮಾಡಬೇಕು. ದೇಶದ ಬಜೆಟ್‌ನ ಬಹುತೇಕ ಮೊತ್ತವನ್ನು ಸೇನೆ ಮತ್ತು ಭದ್ರತೆಗಾಗಿ ಖರ್ಚು ಮಾಡಲಾಗುತ್ತಿದೆ. ಅದನ್ನು ಪ್ರಾಥಮಿಕ ಶಿಕ್ಷಣ ಹಾಗೂ ಮಾನವ ಕಲ್ಯಾಣ ಸೇರಿದಂತೆ ಮೂಲಸೌಕರ್ಯದ ಅಭಿವೃದ್ಧಿಗೆ ಹೆಚ್ಚು ಅನುದಾನ ನೀಡಬೇಕು’ ಎಂದು ತಿಳಿಸಿದರು.

ADVERTISEMENT

‘ದೇಶದಲ್ಲಿ ಜಾತಿ–ಧರ್ಮದ ಹೆಸರಿನಲ್ಲಿ ತಾರತಮ್ಯ ನೀತಿಯನ್ನು ಅನುಸರಿಸುವ ಮೂಲಕ ಸಂವಿಧಾನ ಮೂಲ ಆಶಯಗಳಿಗೆ ಧಕ್ಕೆ ತರಲಾಗುತ್ತಿದೆ’ ಎಂದು ದಿ ಎಕನಾಮಿಕ್ ಆ್ಯಂಡ್‌ ಪೊಲಿಟಿಕಲ್‌ ವೀಕ್ಲಿ ಪತ್ರಿಕೆಯ ಸಂಪಾದಕ ಗೋಪಾಲ್‌ ಗುರು ಹೇಳಿದರು.

‘ಸಂವಿಧಾನದಲ್ಲಿ ಜಾತ್ಯತೀತ ರಾಷ್ಟ್ರ ಎಂಬ ಉಲ್ಲೇಖವಿದೆ. ಆದರೆ, ಇಂದು ದೇಶದಲ್ಲಿ ಇದಕ್ಕೆ ವಿರುದ್ಧವಾಗಿ ಧರ್ಮದ ಆಧಾರದಲ್ಲಿ ಆಡಳಿತ ನಡೆಯುತ್ತಿದೆ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಜಾತಿ–ಧರ್ಮಕ್ಕಿಂತ ಸಂವಿಧಾನವೇ ಮುಖ್ಯ. ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವ ಎಂಬ ಸಂವಿಧಾನದ ಮೂಲ ಆಶಯಗಳನ್ನು ರಕ್ಷಣೆ ಮಾಡಬೇಕಿದೆ. ಸಂವಿಧಾನದ ಮೌಲ್ಯಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.

ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ಉಪಕುಲಪತಿ ಸುಧೀರ್ ಕೃಷ್ಣಸ್ವಾಮಿ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ಕಮಲಾ ಶಂಕರನ್ ಅವರು ಗೋಷ್ಠಿಯನ್ನು ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.