ಬೆಂಗಳೂರು: ನಗರದ ಅರಮನೆ ಮೈದಾನದ ಕೃಷ್ಣ ವಿಹಾರ್ನಲ್ಲಿ ಫೆ.25ರಂದು ರಾಜ್ಯ ಸರ್ಕಾರದಿಂದ ಸಂವಿಧಾನ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಅಂದು ಮೈದಾನದ ಸುತ್ತಮುತ್ತಲ ಕೆಲವು ಮಾರ್ಗದಲ್ಲಿ ವಾಹನ ಸಂಚಾರ ಬದಲಾವಣೆ ಹಾಗೂ ವಾಹನ ನಿಲುಗಡೆ ನಿಷೇಧ ಮಾಡಲಾಗಿದೆ.
ಸಮಾವೇಶಕ್ಕೆ ಅಂದಾಜು 1 ಲಕ್ಷ ಜನರು ಸೇರುವ ನಿರೀಕ್ಷೆಯಿದ್ದು, ಸುಗಮ ಸಂಚಾರಕ್ಕೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಬಳ್ಳಾರಿ ರಸ್ತೆಯ ಹೆಬ್ಬಾಳದಿಂದ ಮೇಖ್ರಿ ವೃತ್ತದವರೆಗೆ, ಮೇಖ್ರಿ ವೃತ್ತದಿಂದ ಜಯಮಹಲ್ ರಸ್ತೆ ಹಾಗೂ ಕಂಟೋನ್ಮೆಂಟ್ ರಸ್ತೆವರೆಗೆ, ಯಶವಂತಪುರ–ಟಾಟಾ ವಿಜ್ಞಾನ ಸಂಸ್ಥೆ–ಮೇಖ್ರಿ ವೃತ್ತದವರೆಗೆ ಕಾರ್ಯಕ್ರಮಕ್ಕೆ ತೆರಳುವ ವಾಹನಗಳನ್ನು ಹೊರತುಪಡಿಸಿ ಬೇರೆಡೆಗೆ ತೆರಳುವ ವಾಹನಗಳು ಪರ್ಯಾಯ ಮಾರ್ಗ ಬಳಸುವಂತೆ ಕೋರಲಾಗಿದೆ.
ಅಂದು ಜಯಮಹಲ್ ರಸ್ತೆ, ತರಳಬಾಳು ರಸ್ತೆ, ನಂದಿದುರ್ಗ ರಸ್ತೆ, ಬಳ್ಳಾರಿ ರಸ್ತೆ, ಮೇಖ್ರಿ ವೃತ್ತದಿಂದ ಯಶವಂತಪುರದವರೆಗೆ ರಸ್ತೆಯ ಎರಡೂ ಬದಿಯಲ್ಲಿ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ. ಅಲ್ಲದೇ, ಹೆಬ್ಬಾಳ ಜಂಕ್ಷನ್, ಯಶವಂತಪುರದ ಗೋವರ್ಧನ್ ಬಳಿ, ಸಿಎಂಟಿಐ ಜಂಕ್ಷನ್, ನೈಸ್ ರಸ್ತೆ ಜಂಕ್ಷನ್ ಬಳಿ ಭಾರಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ ಎಂದು ಸಂಚಾರ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.