ಬೆಂಗಳೂರು: ಸರ್ಜಿಲ್ ಸೊಸೈಟಿ ಆಫ್ ಬೆಂಗಳೂರು ಸಂಸ್ಥೆ ಕಂಠೀರವ ಕ್ರೀಡಾಂಗಣದಲ್ಲಿ ಆಗಸ್ಟ್ 14ರಂದು ಪ್ರಥಮ ಚಿಕಿತ್ಸೆ ಹಾಗೂ ಕಾರ್ಡಿಯೊ ಪಲ್ಮನರಿ ರಿಸಸಿಟೇಶನ್ (ಸಿಪಿಆರ್) ವಿಧಾನ ಕುರಿತು ನಗರದ 2,200 ಪೊಲೀಸರಿಗೆ ನೀಡಿದ ತರಬೇತಿ ಕಾರ್ಯಕ್ರಮಕ್ಕೆ ವರ್ಲ್ಡ್ ರೆಕಾರ್ಡ್ ಆಫ್ ಲಂಡನ್ ಸಂಸ್ಥೆಯು ವಿಶ್ವ ದಾಖಲೆ ಪ್ರಮಾಣ ಪತ್ರ ನೀಡಿದೆ.
ಹೃದಯ ಹಾಗೂ ಶ್ವಾಸಕೋಶ ಸಂಬಂಧಿ ಕಾಯಿಲೆಗೆ ನೀಡಿದ ತರಬೇತಿಯ ನೇತೃತ್ವ ವಹಿಸಿದ್ದ ಐಕ್ಯಾಟ್ ಫೌಂಡೇಷನ್ ಸಂಸ್ಥೆಯ ಡಾ.ಶಾಲಿನಿ ಈ ಬಗ್ಗೆ ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರಿಗೆ ಮಾಹಿತಿ ನೀಡಿದರು.
‘ಆರೋಗ್ಯ ಸಚಿವ ಆರ್.ದಿನೇಶ್ ಗುಂಡೂರಾವ್, ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ ಸಹ ತರಬೇತಿಯಲ್ಲಿ ಭಾಗವಹಿಸಿದ್ದರು. ಒಂದೇ ಸ್ಥಳದಲ್ಲಿ ಅತೀ ಹೆಚ್ಚು ಮಂದಿಗೆ ತರಬೇತಿ ನೀಡಿರುವುದು ಇದೇ ಮೊದಲು. ಪ್ರಥಮ ಚಿಕಿತ್ಸೆ ತರಬೇತಿ ಪಡೆದಿದ್ದರೆ, ತುರ್ತು ಸಂದರ್ಭದಲ್ಲಿ ವ್ಯಕ್ತಿಯ ಜೀವ ಉಳಿಸಲು ಸಾಧ್ಯ. ನಿತ್ಯ ವಿವಿಧ ಘಟನೆಗಳನ್ನು ಪೊಲೀಸರು ನೋಡುತ್ತಾರೆ. ಸಿಆರ್ಪಿ ವಿಧಾನ ಹಾಗೂ ಪ್ರಥಮ ಚಿಕಿತ್ಸೆಯ ಜ್ಞಾನ ಹೊಂದಿರುವುದು ಅಗತ್ಯ. ಹಠಾತ್ ಹೃದಯಾಘಾತ ಸಂದರ್ಭದಲ್ಲಿ ವ್ಯಕ್ತಿಯನ್ನು ಪ್ರಾಣಾಪಾಯದಿಂದ ಪಾರು ಮಾಡಲು ಸಿಪಿಆರ್ ವಿಧಾನ ಸಹಾಯಕ. ಕೋವಿಡ್ ಬಳಿಕ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿವೆ’ ಎಂದು ಹೇಳಿದರು.
ಇದೇ ವೇಳೆ ಸಂಸ್ಥೆ ನೀಡಿರುವ ಪ್ರಮಾಣ ಪತ್ರವನ್ನು ನಗರ ಪೊಲೀಸ್ ಕಮಿಷನರ್ ದಯಾನಂದ ಅವರಿಗೆ ಹಸ್ತಾಂತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.