ಬೆಂಗಳೂರು: ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಆಟೊಗೆ ಹಿಂಬದಿಯಿಂದ ಬಂದ ಕ್ರೇನ್ ಡಿಕ್ಕಿ ಹೊಡೆದ ಪರಿಣಾಮ ಆಟೊದೊಳಗೆ ಕುಳಿತಿದ್ದ ಚಾಲಕ ಮೃತಪಟ್ಟಿರುವ ಘಟನೆ ಉಪ್ಪಾರಪೇಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಹೇರೋಹಳ್ಳಿಯ ನಾಗರಹೊಳೆ ನಗರದ ನಿವಾಸಿ ವಿನೋದ್ ಕುಮಾರ್ (35) ಮೃತಪಟ್ಟವರು.
ವಿನೋದ್ ಕುಮಾರ್ ಬುಧವಾರ ರಾತ್ರಿ ಬಾಡಿಗೆಗೆಂದು ಆಟೊ ತೆಗೆದುಕೊಂಡು ಹೋಗಿದ್ದರು. ಗುರುವಾರ ಬೆಳಿಗ್ಗೆ 6.50ಕ್ಕೆ ಶೇಷಾದ್ರಿಪುರ ರಸ್ತೆಯ ಗಾಂಧಿ ಪಾರ್ಕ್ ಬಳಿ ಆಟೊ ನಿಲ್ಲಿಸಿ ಸ್ನೇಹಿತರೊಂದಿಗೆ ಟೀ ಕುಡಿದಿದ್ದರು. ನಂತರ ಸ್ನೇಹಿತರು ಅಲ್ಲಿಂದ ತೆರಳಿದ ಬಳಿಕ ವಿನೋದ್ ಅವರು ಮತ್ತೆ ಆಟೊದಲ್ಲಿ ಕುಳಿತಿದ್ದರು’ ಎಂದು ಪೊಲೀಸರು ಹೇಳಿದರು.
‘ರೇಸ್ಕೋರ್ಸ್ ಮಾರ್ಗದಲ್ಲಿ ವೇಗವಾಗಿ ಬಂದ ಕ್ರೇನ್, ನಿಂತಿದ್ದ ಆಟೊಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಆಟೊದಲ್ಲಿ ಕುಳಿತಿದ್ದ ವಿನೋದ್ ಕುಮಾರ್ ಕೆಳಗೆ ಬಿದ್ದಿದ್ದು, ಅವರ ತಲೆಯ ಮೇಲೆ ಕ್ರೇನ್ನ ಚಕ್ರ ಹರಿದಿದೆ. ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದರು.
‘ಈ ಬಗ್ಗೆ ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.