ಬೆಂಗಳೂರು: ‘ಚಿತ್ರನಟ ದರ್ಶನ್ ಸ್ವಲ್ಪ ಮುಂಗೋಪಿ, ಆತನಿಗೆ ಸಿಟ್ಟು ಜಾಸ್ತಿ. ಆದರೆ, ಕೊಲೆ ಮಾಡುವಷ್ಟು ಕಟುಕನಲ್ಲ’ ಎಂದು ಮದ್ದೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಕದಲೂರು ಉದಯ್ ಗೌಡ ಹೇಳಿದರು.
ದರ್ಶನ್ ವಿರುದ್ಧದ ಆರೋಪ ಕುರಿತು ಸುದ್ದಿಗಾರರಿಗೆ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ‘ದರ್ಶನ್ ಹಲವು ವರ್ಷಗಳಿಂದ ನನಗೆ ಸ್ನೇಹಿತ. ಕೊಲೆ ಮಾಡುವಂತಹ ಬುದ್ಧಿ ಆತನಿಗೆ ಇಲ್ಲ. ಈ ಪ್ರಕರಣದಲ್ಲಿ ಆತನೇ ಕೊಲೆ ಮಾಡಿದ್ದಾನಾ ಎನ್ನುವುದು ಗೊತ್ತಿಲ್ಲ’ ಎಂದರು.
‘ಈ ಪ್ರಕರಣ ಏಕೆ ನಡೆದಿದೆ? ಹೇಗೆ ನಡೆದಿದೆ ಎನ್ನುವ ಮಾಹಿತಿಯೂ ನನಗಿಲ್ಲ. ಬೇರೆಯವರು ಕೊಲೆ ಮಾಡಿ ದರ್ಶನ್ ಹೆಸರು ಹೇಳಿರಬಹುದಾ ಎಂಬುದೂ ಗೊತ್ತಿಲ್ಲ. ಪ್ರಕರಣದ ತನಿಖೆ ನಡೆಯತ್ತಿದೆ. ಸತ್ಯ ಇನ್ನಷ್ಟೇ ಹೊರಬರಬೇಕಿದೆ’ ಎಂದು ಹೇಳಿದರು.
‘ಮುಂಗೋಪಿ ಆಗಿರುವುದರಿಂದ ಅಭಿಮಾನಿಗಳಿಗೆ ದರ್ಶನ್ ಗದರುತ್ತಿದ್ದ. ಸಿಟ್ಟಿನಿಂದ ಮಾತನಾಡುತ್ತಿದ್ದ. ಇನ್ನೇನು ಕೆಲವು ದಿನಗಳಲ್ಲಿ ಈ ಪ್ರಕರಣದ ಸತ್ಯಾಂಶ ಹೊರ ಬರಲಿದೆ’ ಎಂದರು.
ತಮ್ಮ ಅಂಗರಕ್ಷಕನ ಮೇಲೆ ದರ್ಶನ್ ಬೆಂಬಲಿಗರು ಹಲ್ಲೆ ನಡೆಸಿದ್ದರು ಎಂಬ ಆರೋಪ ಕುರಿತು ಪ್ರತಿಕ್ರಿಯಿಸಿದ ಉದಯ್ ಗೌಡ, ‘ಅದೆಲ್ಲ ಸುಳ್ಳು. ಅಂತಹ ಘಟನೆಯೇ ನಡೆದಿಲ್ಲ. ನಿಮಗೆ ಈ ರೀತಿ ಹೇಳಿದವರು ಯಾರು’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.