ಬೆಂಗಳೂರು: ‘ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಸುಳ್ಳನ್ನು ಸತ್ಯವೆಂದು ಬಿಂಬಿಸಲು ಹೊರಟಿದ್ದಾರೆ. ಮೋದಿ ಪ್ರಧಾನಿಯಾದರೆ ದೇಶ ಬಿಡುತ್ತೇನೆ ಎಂದವರು ಈಗ ಮೋದಿಯನ್ನು ವಿಶ್ವ ಗುರು, ಅವತಾರ ಪುರುಷ ಎಂದು ಕೊಂಡಾಡುತ್ತಿದ್ದಾರೆ’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಶಿವಣ್ಣ ವ್ಯಂಗ್ಯವಾಡಿದ್ದಾರೆ.
‘ಸಿದ್ದರಾಮಯ್ಯ ಅವರನ್ನು ನಂಬಿ ನಾನು ಮೋಸ ಹೋದೆ ಎಂದು ಅನುಕಂಪ ಗಿಟ್ಟಿಸುವ ಮಾತುಗಳನ್ನು ದೇವೇಗೌಡರು ಆಡುತ್ತಿದ್ದಾರೆ. ಆದರೆ, ರಾಮಕೃಷ್ಣ ಹೆಗಡೆ ಮತ್ತು ಜೆ.ಎಚ್. ಪಟೇಲರಿಗೆ ದ್ರೋಹ ಬಗೆದಿದ್ದು ಯಾರು’ ಎಂದು ದೇವೇಗೌಡ ಅವರನ್ನು ಶಿವಣ್ಣ ಪ್ರಶ್ನಿಸಿದ್ದಾರೆ.
‘ಜನತಾ ಪಕ್ಷ ತ್ಯಜಿಸಿ ಸಮಾಜವಾದಿ ಜನತಾ ಪಕ್ಷ ಎಂಬ ಹೊಸ ಪಕ್ಷ ಕಟ್ಟಿದ ದೇವೇಗೌಡರು, ನಿರಾಶರಾಗಿ ರಾಮಕೃಷ್ಣ ಹೆಗಡೆ ಮತ್ತು ಜೆ.ಎಚ್. ಪಟೇಲರ ಕೈಕಾಲು ಹಿಡಿದು ಜನತಾದಳ ಪಕ್ಷಕ್ಕೆ ಸೇರಿದ್ದರು. ಆದರೆ, ಉಂಡಮನೆಯ ಗಳ ಎಣಿಸುವುದು ದೇವೇಗೌಡರ ಜನ್ಮಜಾತ ಗುಣವಾಗಿತ್ತು. ಮುಖ್ಯಮಂತ್ರಿ ಸ್ಥಾನ ಪಡೆಯಲು ಹೆಗಡೆ ಮತ್ತು ಪಟೇಲರ ಮೇಲೆ ಬಾಡಿಗೆ ಗೂಂಡಾಗಳಿಂದ ಹಲ್ಲೆ ಮಾಡಿಸಿದ್ದರು. ಅಂದು ಸಿದ್ದರಾಮಯ್ಯ ಮತ್ತು ಆರ್.ಎಲ್. ಜಾಲಪ್ಪ ನಿಮ್ಮ ಜೊತೆ ಗಟ್ಟಿಯಾಗಿ ನಿಲ್ಲದೇ ಇದ್ದರೆ ನೀವು ಮುಖ್ಯಮಂತ್ರಿಯಾಗಲು ಸಾಧ್ಯವೇ ಇರಲಿಲ್ಲ. ಈ ಸತ್ಯ ಒಪ್ಪಿಕೊಳ್ಳುವಾಗ ಮಾತ್ರ ಮರೆವಿನ ಸಮಸ್ಯೆ ಕಾಡುತ್ತದೆಯೇ’ ಎಂದೂ ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.