ಬೆಂಗಳೂರು: ‘ಜ್ಞಾನಕ್ಕೆ ಸಮಾನವಾದುದು ಯಾವುದೂ ಇಲ್ಲ. ಜ್ಞಾನ ಯಾರಲ್ಲಿ ಇರುತ್ತದೆಯೋ ಅವರೇ ಶ್ರೀಮಂತರು. ಶಿಕ್ಷಣದಿಂದ ಮಾತ್ರ ಶಕ್ತಿ ಬರುತ್ತದೆ’ ಎಂದು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ಕರ್ನಾಟಕದ ವಿವಿಧ ಶಾಲೆಗಳ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ರಕ್ಷಾ ಫೌಂಡೇಷನ್ ವತಿಯಿಂದ 2 ಲಕ್ಷ ನೋಟ್ ಬುಕ್ಗಳನ್ನು ವಿತರಿಸಿದ ಸಮಾರಂಭದಲ್ಲಿ ಶನಿವಾರ ಅವರು ಮಾತನಾಡಿದರು.
ಸರ್ಕಾರಿ ಶಾಲೆಯ ಮಕ್ಕಳು ಹೆಚ್ಚು ಪ್ರತಿಭಾವಂತರಾಗಿದ್ದು, ಅವರಿಗೆ ಸರಿಯಾದ ಪ್ರೋತ್ಸಾಹ ದೊರಕಿದರೆ ಸಾಧಕರಾಗಿ ಬೆಳೆಯುತ್ತಾರೆ. ರಕ್ಷಾ ಫೌಂಡೇಷನ್ನಂಥ ಸಂಸ್ಥೆಗಳು ಈ ರೀತಿಯ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಿವೆ ಎಂದು ಹೇಳಿದರು.
‘ಈ ಜಗದಲ್ಲಿ ಅನಾಥರು ಯಾರೂ ಇಲ್ಲ. ದೇವರು ಎಲ್ಲರನ್ನೂ ಕಾಪಾಡುತ್ತಾನೆ’ ಎಂದು ಹೇಳಿದ ನಟ ಕಿಚ್ಚ ಸುದೀಪ್, ‘ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಪೊಲೀಸ್ ಸೇವೆಗೆ ಸೇರುತ್ತಿರುವುದು ಶ್ಲಾಘನಾರ್ಹ’ ಎಂದರು.
ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ಶೇ 90ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ರಕ್ಷಾ ಫೌಂಡೇಷನ್ ವತಿಯಿಂದ ನಗದು ಪುರಸ್ಕಾರ ನೀಡಲಾಯಿತು. ಪ್ರತಿಭಾವಂತರನ್ನು ಸನ್ಮಾನಿಸಲಾಯಿತು. ಅನಾಥಾಶ್ರಮದ ಇಬ್ಬರು ವಿದ್ಯಾರ್ಥಿಗಳನ್ನು ದತ್ತು ಸ್ವೀಕಾರ ಮಾಡಲಾಯಿತು. ಸಾರ್ವಜನಿಕರಿಗಾಗಿ ಆಂಬುಲೆನ್ಸ್ ಲೋಕಾರ್ಪಣೆ ಮಾಡಲಾಯಿತು. ರಕ್ಷಾ ಫೌಂಡೇಷನ್ 12 ವರ್ಷಗಳಿಂದ ವಿದ್ಯಾರ್ಥಿಗಳಿಗೆ ನೋಟ್ಬುಕ್ ವಿತರಿಸುತ್ತಿದೆ ಎಂದು ಸಂಘಟಕರು ವಿವರಿಸಿದರು.
ಸಂಸದ ತೇಜಸ್ವಿಸೂರ್ಯ, ಶಾಸಕರಾದ ಸಿ.ಕೆ. ರಾಮಮೂರ್ತಿ, ಉದಯ್ ಗರುಡಾಚಾರ್, ಸತೀಶ್ ರೆಡ್ಡಿ, ಮಾಜಿ ಮೇಯರ್ ಎಸ್.ಕೆ. ನಟರಾಜ್, ಬಿಬಿಎಂಪಿ ಮಾಜಿ ಸದಸ್ಯರಾದ ನಾಗರತ್ನ ರಾಮಮೂರ್ತಿ, ಸೋಮಶೇಖರ್, ಲಕ್ಷ್ಮಿನಟರಾಜ್, ಮಾಲತಿ ಸೋಮಶೇಖರ್, ದೀಪಿಕಾ ಎಲ್. ಮಂಜುನಾಥ ರೆಡ್ಡಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.