ಬೆಂಗಳೂರು: ‘ಜಿಲ್ಲೆಗಳಿಂದ ಸರಿಯಾಗಿ ವರದಿ ಬರುತ್ತಿದ್ದರೆ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ 150 ಇನ್ಸ್ಪೆಕ್ಟರ್ ಹುದ್ದೆಗಳು ಭರ್ತಿಯಾಗುತ್ತಿದ್ದವು. ಜಿಲ್ಲಾಧಿಕಾರಿ ನೀಡಿದ ವರದಿಯಂತೆ ಕೇವಲ 84 ಹುದ್ದೆಗಳು ಭರ್ತಿ ಮಾಡಲಾಗಿದೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಸಾರಿಗೆ ಇಲಾಖೆ ವತಿಯಿಂದ ಸಾರಿಗೆ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಮೋಟಾರು ವಾಹನ ನಿರೀಕ್ಷಕರಿಗಾಗಿ ಶನಿವಾರ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಎಲ್ಲರೂ ಒಂದು ರೂಪಾಯಿಯನ್ನು ಕೊಡದೇ ಆಯ್ಕೆಯಾಗಿದ್ದಾರೆ. ಆ ಮೂಲಕ ಸಂಪೂರ್ಣ ಪಾರದರ್ಶಕವಾಗಿ ಆಯ್ಕೆ ಪ್ರಕ್ರಿಯೆ ನಡೆದಿದೆ. ಇನ್ನು ಕನಿಷ್ಠ 35 ವರ್ಷ ದುಡಿಯಬಹುದು. ಸಹಾಯಕ ಆಯುಕ್ತ ಹುದ್ದೆವರೆಗೆ ತಲುಪುವ ಅವಕಾಶವಿದೆ. ಜನರಿಗೆ ತೊಂದರೆ ನೀಡದಂತೆ ಉತ್ತಮವಾಗಿ ಕೆಲಸ ಮಾಡಿ ಇಲಾಖೆಗೆ ಉತ್ತಮ ಹೆಸರು ತರಬೇಕು’ ಎಂದು ಸಲಹೆ ನೀಡಿದರು.
‘ಅತಿ ಹೆಚ್ಚು ಆದಾಯ ಸಂಗ್ರಹವಾಗುವ ಖಾತೆ ನಮ್ಮದು. ಪ್ರತಿ ವರ್ಷ ₹13 ಸಾವಿರ ಕೋಟಿ ಸಂಗ್ರಹವಾಗುತ್ತಿದೆ’ ಎಂದು ಮಾಹಿತಿ ನೀಡಿದರು.
ಸಾರಿಗೆ ಆಯುಕ್ತ ಯೋಗಿಶ್ ಎ.ಎಂ., ಹೆಚ್ಚುವರಿ ಆಯುಕ್ತ ಸಿ. ಮಲ್ಲಿಕಾರ್ಜುನ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.