ಬೆಂಗಳೂರು: ‘ನಾವು ಒಕ್ಕಲಿಗರಿಗೆ ಎಲ್ಲೂ ಅನ್ಯಾಯ ಮಾಡಿಲ್ಲ. ನಮ್ಮ ಕಾಂಗ್ರೆಸ್ ಪಕ್ಷ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಕೆಲಸವನ್ನು ಮೊದಲಿನಿಂದಲೂ ಮಾಡುತ್ತಿದೆ. ಈಗಲೂ ಮಾಡುತ್ತಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಗ್ರಾಮಾಂತರ ಸೇರಿದಂತೆ ನಗರದ ಮೂರು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯ ಒಕ್ಕಲಿಗರ ಶೃಂಗಸಭೆಯಲ್ಲಿ ಸೋಮವಾರ ಅವರು ಮಾತನಾಡಿದರು.
‘ನಮ್ಮ ಸಚಿವ ಸಂಪುಟದಲ್ಲಿ ಏಳು ಒಕ್ಕಲಿಗ ಸಚಿವರಿದ್ದಾರೆ. 11 ಜನ ಸಚಿವ ಸಂಪುಟದ ದರ್ಜೆ ಹೊಂದಿರುವ ಅಧ್ಯಕ್ಷರಿದ್ದಾರೆ’ ಎಂದರು.
‘ಸೌಮ್ಯಾರೆಡ್ಡಿ ಹೊರದೇಶದಲ್ಲಿ ವಿದ್ಯಾಭ್ಯಾಸ ಮಾಡಿ ಅತಿ ಹೆಚ್ಚು ಜ್ಞಾನ ಹೊಂದಿದ್ದಾರೆ. ಶಾಸಕಿಯಾಗಿ ಅವರು ಐದು ವರ್ಷ ಜಯನಗರದಲ್ಲಿ ಮಾಡಿದ ಕೆಲಸ ಎಲ್ಲರಿಗೂ ತಿಳಿದಿದೆ. ಜಿಎಸ್ಟಿ, ಮೇಕೆದಾಟು ನೀರು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಲೋಕಸಭೆಯಲ್ಲಿ ಪ್ರಸ್ತಾಪ ಮಾಡಲು ಅರಿವು ಹೊಂದಿರುವ ಮಹಿಳಾ ಸದಸ್ಯರ ಅಗತ್ಯವಿದೆ. ಅವರು ಈ ಬೆಂಗಳೂರಿನಿಂದ ಆಯ್ಕೆಯಾಗಬೇಕು. ಸೌಮ್ಯಾರೆಡ್ಡಿ ಅವರನ್ನು ನಾವೆಲ್ಲರೂ ಒಟ್ಟಾಗಿ ಬೆಂಬಲಿಸಬೇಕು’ ಎಂದರು.
‘ಬೆಂಗಳೂರು ಗ್ರಾಮಾಂತರ ಸೇರಿದಂತೆ ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ನಮ್ಮ ಸಮುದಾಯದವರು ಕಾಂಗ್ರೆಸ್ ಪಕ್ಷದ ಕೈ ಹಿಡಿಯುವಂತೆ ಎಲ್ಲ ಮತದಾರರಿಗೂ ಮನವಿ ಮಾಡಬೇಕು’ ಎಂದು ಶಿವಕುಮಾರ್ ಹೇಳಿದರು.
ಸಭೆಯಲ್ಲಿ ವಕೀಲ ಸಂಘದ 14 ನಿರ್ದೇಶಕರು, ಒಕ್ಕಲಿಗರ ಸಂಘದ ಅಧ್ಯಕ್ಷ, ಸಚಿವರಾದ ರಾಮಲಿಂಗಾರೆಡ್ಡಿ, ಡಿ.ಕೆ. ಶಿವಕುಮಾರ್, ಕೃಷ್ಣಬೈರೇಗೌಡ, ಶಾಸಕ ಪ್ರಿಯಕೃಷ್ಣ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.