ಬೆಂಗಳೂರು: ಅಂತರರಾಷ್ಟ್ರೀಯ ಸುತ್ತುಗಳ ‘ಲಾ ಏಷಿಯಾ ಅಂತರರಾಷ್ಟ್ರೀಯ ಅಣಕು ನ್ಯಾಯಾಲಯ ಸ್ಪರ್ಧೆ– 2023’ ರಾಮಯ್ಯ ಕಾನೂನು ಕಾಲೇಜಿನಲ್ಲಿ ಶುಕ್ರವಾರ ಆರಂಭವಾಯಿತು.
ಬಾರ್ ಅಸೋಸಿಯೇಷನ್ ಆಫ್ ಇಂಡಿಯಾದ ವತಿಯಿಂದ ‘ಲಾ ಏಷಿಯಾ’ ಸಮ್ಮೇಳನದ ಅಂಗವಾಗಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ರಾಮಯ್ಯ ಕಾನೂನು ಕಾಲೇಜು ಸ್ಪರ್ಧೆಯ ಅತಿಥ್ಯ ವಹಿಸಿದ್ದು, ಗೋಕುಲ ಎಜುಕೇಷನ್ ಫೌಂಡೇಷನ್ ಅಧ್ಯಕ್ಷ ಎಂ.ಆರ್.ಜಯರಾಂ ಸ್ಪರ್ಧೆಯನ್ನು ಉದ್ಘಾಟಿಸಿದರು. ‘ಕಾನೂನು ವೃತ್ತಿಯಲ್ಲಿ ಪರಿಣಾಮಕಾರಿ ಸಂವಹನ ಕೌಶಲದ ಪ್ರಾಮುಖ್ಯವಿದೆ. ವಕೀಲರಾದವರಿಗೆ ಈ ಕೌಶಲ ಅಳವಡಿಸಿಕೊಳ್ಳುವುದು ಆದ್ಯತೆಯಾಗಬೇಕಿದೆ’ ಎಂದರು.
ಲಾ ಏಷಿಯಾ ಅಣಕು ನ್ಯಾಯಾಲಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಫೇಲ್ ಟೇ, ಸಮಿತಿ ಮಾಜಿ ಅಧ್ಯಕ್ಷ ಇಸೋಮಿ ಸುಝುಕಿ, ತೀರ್ಪುಗಾರರ ಪರವಾಗಿ ವೆಸ್ಟ್ ನರೆಥ್ ಹಿಬ್, ರಾಮಯ್ಯ ಕಾನೂನು ಕಾಲೇಜಿನ ನಿರ್ದೇಶಕ ಎಂ.ಆರ್.ಆನಂದರಾಮ್, ಗೋಕುಲ್ ಎಜುಕೇಷನ್ ಫೌಂಡೇಷನ್ ಮುಖ್ಯಾಧಿಕಾರಿ ಬಿ.ಎಸ್.ರಾಮಪ್ರಸಾದ್, ಮುಖ್ಯ ಹಣಕಾಸು ಅಧಿಕಾರಿ ಜಿ. ರಾಮಚಂದ್ರ, ರಾಮಯ್ಯ ಕಾನೂನು ಕಾಲೇಜಿನ ಪ್ರಾಂಶುಪಾಲ ಉಮಾಮಹೇಶ್ ಸತ್ಯನಾರಾಯಣ್ ಹಾಜರಿದ್ದರು.
ಅರ್ಹತೆ ಪಡೆದ ಏಳು ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿವೆ. ಎನ್ಎಲ್ಯು ಜೋಧ್ಪುರ್, ಸಿಂಗಪುರ, ಮಲೇಷ್ಯಾ, ಹಾಂಕಾಂಗ್, ಯುನೈಟೆಡ್ ಕಿಂಗ್ಡಮ್, ಚೀನಾ, ಆಸ್ಟ್ರೇಲಿಯಾ ಸೇರಿದಂತೆ 30 ವಿವಿಧ ದೇಶಗಳು 60 ಕಾನೂನು ವಿದ್ಯಾಲಯಗಳು ಭಾಗವಹಿಸುತ್ತಿವೆ. ನಾಲ್ಕು ದಿನದಲ್ಲಿ ಹಲವು ಕಠಿಣ ಸ್ಪರ್ಧೆಗಳು ಮುಗಿದ ನಂತರ ನ.27ರಂದು ವಿಜೇತ ತಂಡವನ್ನು ನಿರ್ಧರಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.