ಬೆಂಗಳೂರು: ‘ಕರ್ನಾಟಕದಲ್ಲಿ ಎಲ್ಲ ಬಗೆಯ ಉದ್ಯೋಗದಲ್ಲಿಯೂ ಕನ್ನಡಿಗರಿಗೇ ಸಿಂಹಪಾಲು ಇರಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಆಗ್ರಹಿಸಿದ್ದಾರೆ.
ಕನ್ನಡಿಗರಿಗೆ ಉದ್ಯೋಗದ ಸಂಬಂಧ ಕರ್ನಾಟಕ ರಕ್ಷಣಾ ವೇದಿಕೆ ಜುಲೈ 1ರಂದು ರಾಜ್ಯದಾದ್ಯಂತ ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹವನ್ನು ಬೆಂಬಲಿಸಿರುವ ಅವರು, ‘ಸರೋಜಿನಿ ಮಹಿಷಿ ವರದಿ ಕೂಡ ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕೆಂದು ಹೇಳಿತ್ತು. ಇತ್ತೀಚೆಗೆ ಜಾರಿಯಾದ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯ್ದೆ–2022ರಲ್ಲಿಯೂ ಕನ್ನಡಿಗರಿಗೇ ಉದ್ಯೋಗವೆಂಬ ಸಂಗತಿಯನ್ನು ಸ್ಪಷ್ಟವಾಗಿ ಹೇಳಲಾಗಿದೆ. ಜಾಗತೀಕರಣದಿಂದ ಉದ್ಯೋಗಾವಕಾಶಗಳ ಸ್ವರೂಪ ಬದಲಾಗುತ್ತಿದೆ. ಹೊಸ ಮಾದರಿಯ ಶ್ರೇಣಿಕೃತ ವ್ಯವಸ್ಥೆ ರೂಪುಗೊಳ್ಳುತ್ತಿದೆ. ಆದ್ದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶ ದೊರಕುವಂತೆ ಮಾಡುವುದು ಅತ್ಯಗತ್ಯ’ ಎಂದು ಹೇಳಿದ್ದಾರೆ.
‘ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಉದ್ಯೋಗದಲ್ಲಿ ಮಾತ್ರವಲ್ಲದೆ, ಖಾಸಗಿ ಮತ್ತು ಅತಿ ಹೆಚ್ಚಿನ ಉದ್ಯೋವಕಾಶ ಕಲ್ಪಿಸುತ್ತಿರುವ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿಯೂ ಕನ್ನಡಿಗರಿಗೆ ಉದ್ಯೋಗಗಳು ದೊರಕಬೇಕು. ಕನ್ನಡಿಗ ಎನ್ನಿಸಿಕೊಳ್ಳಲು ಹದಿನೈದು ವರ್ಷ ವಾಸವಾಗಿರಬೇಕು ಎನ್ನುವ ನಿಯಮದ ಜೊತೆಗೆ ಕನ್ನಡ ಓದಲು-ಬರೆಯಲು-ಸಂವಹನ ನಡೆಸಲು ಬರಬೇಕು ಎಂಬ ಅಂಶವನ್ನೂ ಸೇರಿಸಬೇಕು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.