ADVERTISEMENT

ಪೊಲೀಸ್‌ ಕಚೇರಿ ಜಾಗ ತಮ್ಮದೆಂದು ದಾಖಲೆ ಸೃಷ್ಟಿ: 6 ಮಂದಿ ವಿರುದ್ಧ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 6 ಜೂನ್ 2024, 16:07 IST
Last Updated 6 ಜೂನ್ 2024, 16:07 IST
   

ಬೆಂಗಳೂರು: ನಗರ ಕೇಂದ್ರ ವಲಯದ ಪೊಲೀಸ್‌ ಕಚೇರಿಗೆ ಸೇರಿದ ಜಾಗ ತಮ್ಮದೆಂದು ದಾಖಲೆ ಸೃಷ್ಟಿಸಿಕೊಂಡಿದ್ದ ಆರು ಮಂದಿ ವಿರುದ್ಧ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯಾರಣ್ಯಪುರದ ಎಂ.ಡಿ.ಹನೀಫ್‌, ವಿಜಯನಗರದ ರಾಜಶೇಖರ್‌, ಉಲ್ಲಾಳದ ಮಹಮ್ಮದ್ ನದೀಮ್‌, ಸಂಜಯನಗರದ ಮೋಹನ್‌ ಶೆಟ್ಟಿ, ಗಣಪತಿ ಹಾಗೂ ಜಹೀರ್‌ ಎಂಬವರ ವಿರುದ್ಧ ಎಫ್ಐಆರ್‌ ದಾಖಲಾಗಿದೆ.

ಜಿಲ್ಲಾ ನಿಯಂತ್ರಣ ಕೊಠಡಿ ವೈರ್‌ಲೆಸ್‌ ವಿಭಾಗದ ಇನ್‌ಸ್ಪೆಕ್ಟರ್‌ ಸಂತೋಷ್‌ಗೌಡ ದೂರು ನೀಡಿದ್ದು ದೂರು ಆಧರಿಸಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

ADVERTISEMENT

‘ಜೂನ್‌ 6ರಂದು ನಗರದಲ್ಲಿರುವ ಕೇಂದ್ರ ವಲಯ ಪೊಲೀಸ್‌ ಕಚೇರಿ ಹಾಗೂ ಗ್ರಾಮಾಂತರ ಜಿಲ್ಲಾ ಪೊಲೀಸ್ ಕಚೇರಿ ಆವರಣಕ್ಕೆ ನುಗ್ಗಿದ್ದ ಇಬ್ಬರು ಆರೋಪಿಗಳು ವಿಡಿಯೊ ಚಿತ್ರೀಕರಣ ಮಾಡುತ್ತಿದ್ದರು. ಜತೆಗೆ, ಫೋಟೊ ತೆಗೆಯುತ್ತಿದ್ದರು. ಅವರನ್ನು ಪ್ರಶ್ನಿಸಿದಾಗ ನನ್ನನ್ನು ಬೆದರಿಸಿದರು. ಅಲ್ಲದೇ ಈ ಜಾಗದ ದಾಖಲೆ ಮೋಹನ್‌ಶೆಟ್ಟಿ ಹಾಗೂ ರಾಜಶೇಖರ್ ಬಳಿಯಿದೆ ಎಂದೂ ಹೇಳಿದ್ದರು. ಅವರನ್ನು ಕಚೇರಿಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ಜಹೀರ್‌ ಅಹಮದ್‌ ಸೇರಿ ಹಲವರು ಸ್ವತ್ತಿನ ಜಿಪಿಎ ಮಾಡಿಸಿಕೊಂಡಿರುವುದಾಗಿ ಬಾಯ್ಬಿಟ್ಟಿದ್ದರು’ ಎಂದು ದೂರಿನಲ್ಲಿ ಉಲ್ಲೇಖಿಸಿದ್ಧಾರೆ.

‘ಪೊಲೀಸ್‌ ಇಲಾಖೆಗೆ ಸೇರಿದ ಜಾಗವನ್ನು ಮಾರಾಟ ಮಾಡುವ ದುರುದ್ದೇಶದಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡಿರುವುದು ಗೊತ್ತಾಗಿದೆ. ಅಲ್ಲದೇ ಆರೋಪಿಗಳು ಕಚೇರಿ ಆವರಣಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದರು. ಪ್ರಕರಣ ತನಿಖೆ ನಡೆಯುತ್ತಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.