ಬೆಂಗಳೂರು: ನಗರದ ಹೂವಿನ ವ್ಯಾಪಾರಿಯೊಬ್ಬರಿಗೆ ನಕಲಿ ಚಿನ್ನವನ್ನು ಮಾರಾಟ ಮಾಡಿ ₹4 ಲಕ್ಷ ವಂಚಿಸಲಾಗಿದ್ದು, ಈ ಬಗ್ಗೆ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಜಿ.ಎಂ. ಪಾಳ್ಯದ ನಿವಾಸಿಯಾಗಿರುವ 43 ವರ್ಷದ ಹೂವಿನ ವ್ಯಾಪಾರಿ ವಂಚನೆ ಬಗ್ಗೆ ದೂರು ನೀಡಿದ್ದಾರೆ. ಅಪರಿಚಿತನ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
‘ದೂರುದಾರರ ಹೂವಿನ ಅಂಗಡಿಗೆ ಡಿ. 12ರಂದು ಬಂದಿದ್ದ ಆರೋಪಿ, ‘ನನ್ನ ಬಳಿ ಚಿನ್ನವಿದೆ. ಅದನ್ನು ಮಾರಾಟ ಮಾಡಬೇಕು. ತಂಗಿ ಮದುವೆಗೆ ಹಣ ಬೇಕಿದೆ. ಆದರೆ, ಬೆಂಗಳೂರಿನಲ್ಲಿ ಯಾರೂ ಪರಿಚಯವಿಲ್ಲ’ ಎಂದಿದ್ದ. ಚಿನ್ನವನ್ನು ತಂದು ತೋರಿಸುವಂತೆ ದೂರುದಾರ ಹೇಳಿದ್ದರು.’
‘ಡಿ. 19ರಂದು ಪುನಃ ಅಂಗಡಿ ಬಳಿ ಬಂದಿದ್ದ ಆರೋಪಿ, ಅಸಲಿ ಚಿನ್ನದ ಮಾದರಿಯನ್ನು ತಂದು ತೋರಿಸಿ ಹೊರಟು ಹೋಗಿದ್ದ. ನಂತರ, ಚಿನ್ನ ಖರೀದಿಸಲು ದೂರುದಾರರು ಒಪ್ಪಿದ್ದರು. ಡಿ. 21ರಂದು ಪುನಃ ಭೇಟಿಯಾಗಿದ್ದ ಆರೋಪಿ, ₹4 ಲಕ್ಷ ಪಡೆದು ಚಿನ್ನ ಕೊಟ್ಟು ತೆರಳಿದ್ದ. ದೂರುದಾರ ಮನೆಗೆ ಹೋಗಿ ಪರಿಶೀಲನೆ ನಡೆಸಿದಾಗ, ಅದು ನಕಲಿ ಚಿನ್ನವೆಂದು ಗೊತ್ತಾಗಿದೆ. ಆರೋಪಿ ಮೊಬೈಲ್ ಸಹ ಸ್ವಿಚ್ಡ್ ಆಫ್ ಆಗಿದೆ’ ಎಂದು ಪೊಲೀಸರು ತಿಳಿಸಿದರು.
‘ನಕಲಿ ಚಿನ್ನವನ್ನು ಅಸಲಿ ಎಂಬುದಾಗಿ ಹೇಳಿ ವಂಚಿಸುವ ಜಾಲ ನಗರದಲ್ಲಿದೆ. ಇಂಥ ಆರೋಪಿಗಳ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು. ಚಿನ್ನ ಮಾರಲು ಯಾರಾದರೂ ಅಪರಿಚಿತರು ಬಂದರೆ ಸಮೀಪದ ಠಾಣೆಗೆ ಮಾಹಿತಿ ನೀಡಬೇಕು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.