ADVERTISEMENT

ಬೆಂಗಳೂರು | ಕೌಟುಂಬಿಕ ಕಲಹ: ಅತ್ತೆ–ಮಾವ ಆತ್ಮಹತ್ಯೆ

ಪುತ್ರನ ಜತೆಗೆ ಗಲಾಟೆಯಿಂದ ತವರು ಸೇರಿದ್ದ ಸೊಸೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 14:50 IST
Last Updated 2 ಜುಲೈ 2024, 14:50 IST
<div class="paragraphs"><p>ಆತ್ಮಹತ್ಯೆ (ಪ್ರಾತಿನಿಧಿಕ ಚಿತ್ರ)</p></div>

ಆತ್ಮಹತ್ಯೆ (ಪ್ರಾತಿನಿಧಿಕ ಚಿತ್ರ)

   

ಬೆಂಗಳೂರು: ಕೌಟುಂಬಿಕ ಕಲಹದಿಂದ ಸೊಸೆಯೊಂದಿಗೆ ಮನಸ್ತಾಪ ಮಾಡಿಕೊಂಡಿದ್ದ ಅತ್ತೆ–ಮಾವ ಹಳೇ ಬೈಯಪ್ಪನಹಳ್ಳಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಬೈಯಪ್ಪನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಳೇ ಬೈಯಪ್ಪನಹಳ್ಳಿ ನಿವಾಸಿಗಳಾದ ಚಂದ್ರಶೇಖರ್(54) ಮತ್ತು ಅವರ ಪತ್ನಿ ಶಾರದಮ್ಮ(46) ಆತ್ಮಹತ್ಯೆ ಮಾಡಿಕೊಂಡವರು.

ADVERTISEMENT

ಸೋಮವಾರ ಸಂಜೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ಅಂದೇ ರಾತ್ರಿ ಅವರ ಕಿರಿಯ ಮಗ ಮನೆಗೆ ಬಂದಾಗ ವಿಷಯ ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.

‘ಚಂದ್ರಶೇಖರ್ ಹಾಗೂ ಶಾರದಮ್ಮ ಅವರು ತಮ್ಮ ಹಿರಿಯ ಮಗ ಪ್ರಶಾಂತ್ ಹಾಗೂ ಕಿರಿಯ ಮಗನ ಜತೆ ನೆಲೆಸಿದ್ದರು. ಪ್ರಶಾಂತ್ ಕೆಲಸಕ್ಕೆ ಹೋಗುತ್ತಿರಲಿಲ್ಲ. ಕಿರಿಯ ಮಗ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡುತ್ತಿದ್ದಾರೆ. ಕೆಲವು ತಿಂಗಳ ಹಿಂದಷ್ಟೇ ಪ್ರಶಾಂತ್‌ ಅವರಿಗೆ ಮದುವೆ ಮಾಡಲಾಗಿತ್ತು. ಕೌಟುಂಬಿಕ ವಿಚಾರಕ್ಕೆ ಅತ್ತೆ–ಮಾವ ಹಾಗೂ ಸೊಸೆ ಮಧ್ಯೆ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ಪ್ರಶಾಂತ್ ಮದ್ಯವ್ಯಸನಿ ಆಗಿದ್ದರು. ಅದರಿಂದ ಬೇಸರಗೊಂಡಿದ್ದ ಸೊಸೆ, ಮನೆ ಬಿಟ್ಟು ತವರು ಮನೆ ಸೇರಿದ್ದರು. ಈ ಮಧ್ಯೆ ರಾಜಿ ಸಂಧಾನ ನಡೆಸಲಾಗಿತ್ತು. ಅವರು ಮನೆಗೆ ಬರಲು ಒಪ್ಪಿರಲಿಲ್ಲ. ಪತಿ ಬೇರೆ ಮನೆ ಮಾಡಿದರೆ ಮಾತ್ರ ಬರುವುದಾಗಿ ಷರತ್ತು ಹಾಕಿದ್ದರು. ಇದಕ್ಕೆ ಚಂದ್ರಶೇಖರ್‌ ಅವರು ಒಪ್ಪಿರಲಿಲ್ಲ. ಸೊಸೆ ಮನೆಗೆ ವಾಪಸ್‌ ಆಗದಿರುವ ವಿಷಯದಿಂದ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಮನೆಯಲ್ಲಿ ಯಾರೂ ಇಲ್ಲದ ವೇಳೆ ಕೃತ್ಯ:

ಸೋಮವಾರ ಸಂಜೆ 5 ಗಂಟೆ ಸುಮಾರಿಗೆ ತಮ್ಮ ಇಬ್ಬರು ಮಕ್ಕಳೂ ಮನೆಯಲ್ಲಿ ಇಲ್ಲದ ವೇಳೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋಣೆಯಲ್ಲಿ ಶಾರದಮ್ಮ ಆತ್ಮಹತ್ಯೆ ಮಾಡಿಕೊಂಡರೆ, ಚಂದ್ರಶೇಖರ್ ಮನೆಯ ಮಧ್ಯದ ಕೋಣೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ. ರಾತ್ರಿ 7ರ ಸುಮಾರಿಗೆ ಕಿರಿಯ ಮಗ ಮನೆಗೆ ಬಂದಾಗ ವಿಷಯ ತಿಳಿದು ಪೊಲೀಸರು ಮಾಹಿತಿ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.