ADVERTISEMENT

ನಿಗಮ–ಮಂಡಳಿಗಳ ಮುಖ್ಯಸ್ಥರಿಗೆ ನೋಟಿಸ್‌?

ಆದೇಶ ಉಲ್ಲಂಘಿಸಿ ಬ್ಯಾಂಕ್‌ಗಳಲ್ಲಿ ₹1,731.16 ಕೋಟಿ ಠೇವಣಿ

​ಪ್ರಜಾವಾಣಿ ವಾರ್ತೆ
Published 10 ಜೂನ್ 2024, 23:30 IST
Last Updated 10 ಜೂನ್ 2024, 23:30 IST
<div class="paragraphs"><p>ವಿಧಾನಸೌಧ ( ಸಾಂದರ್ಭಿಕ ಚಿತ್ರ)</p></div>

ವಿಧಾನಸೌಧ ( ಸಾಂದರ್ಭಿಕ ಚಿತ್ರ)

   

ಬೆಂಗಳೂರು: ಆದೇಶ ಉಲ್ಲಂಘಿಸಿ ಸಂಸ್ಥೆಯ ಹಣವನ್ನು ಬ್ಯಾಂಕ್‌ ಖಾತೆಗಳಲ್ಲಿ ಇರಿಸಿರುವ ನಿಗಮ ಮತ್ತು ಮಂಡಳಿಗಳ ವ್ಯವಸ್ಥಾಪಕ ನಿರ್ದೇಶಕರು ಮತ್ತು ಲೆಕ್ಕಾಧಿಕಾರಿಗಳಿಗೆ ನೋಟಿಸ್‌ ನೀಡಲು ಸಿದ್ಧತೆ ಆರಂಭಿಸಿದೆ. 

ನಿಗಮ, ಮಂಡಳಿಗಳು ಬ್ಯಾಂಕ್‌ ಖಾತೆಗಳಲ್ಲಿ ಹಣ ಇರಿಸದಂತೆ 2023ರಲ್ಲೇ ಆದೇಶ ಹೊರಡಿಸಲಾಗಿತ್ತು. ರಾಜ್ಯ ಹುಜೂರ್‌ ಖಜಾನೆಯಲ್ಲಿ ಆಯಾ ಸಂಸ್ಥೆಗಳ ಖಾತೆ ತೆರೆದು ಹಣ ಠೇವಣಿ ಇರಿಸುವಂತೆ ಆದೇಶದಲ್ಲಿ ಸೂಚಿಸಲಾಗಿತ್ತು. ಆದರೆ, ಬಹುತೇಕ ನಿಗಮ, ಮಂಡಳಿಗಳು ಅದನ್ನು ಪಾಲಿಸಿಲ್ಲ.

ADVERTISEMENT

ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ಯಾಂಕ್‌ ಖಾತೆಯಿಂದ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವ ಹಗರಣ ಬಹಿರಂಗವಾದ ಬಳಿಕ ಹಣಕಾಸು ಇಲಾಖೆಯು ಪರಿಶೀಲನೆ ಆರಂಭಿಸಿದೆ. ಸಮಾಜ ಕಲ್ಯಾಣ, ಪರಿಶಿಷ್ಟ ಪಂಗಡಗಳ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಕಂದಾಯ ಇಲಾಖೆಯ ಅಧೀನದಲ್ಲಿರುವ ಜಾತಿವಾರು ನಿಗಮ, ಮಂಡಳಿಗಳು ಬ್ಯಾಂಕ್‌ಗಳಲ್ಲಿ ಖಾತೆ ತೆರೆದು ₹1,731.16 ಕೋಟಿ ಇರಿಸಿರುವುದು ಪತ್ತೆಯಾಗಿದೆ. ಈ ಎಲ್ಲ ನಿಗಮ, ಮಂಡಳಿಗಳು ಖಾತೆಗಳಲ್ಲಿ ಇರಿಸಿರುವ ಮೊತ್ತವನ್ನು ಹುಜೂರ್‌ ಖಜಾನೆಗೆ ವರ್ಗಾಯಿಸುವಂತೆ ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌.ಕೆ. ಅತೀಕ್‌ ಅವರು ಸಂಬಂಧಿಸಿದ ಬ್ಯಾಂಕ್‌ಗಳ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ.

‘ಇನ್ನೂ ಹಲವು ಇಲಾಖೆಗಳ ಅಧೀನದಲ್ಲಿರುವ ನಿಗಮ, ಮಂಡಳಿಗಳ ಹಣದ ವಹಿವಾಟಿನ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಎಲ್ಲ ನಿಗಮ, ಮಂಡಳಿಗಳ ಹಣವನ್ನೂ ಬ್ಯಾಂಕ್‌ಗಳಿಂದ ಹುಜೂರ್‌ ಖಜಾನೆಯ ಖಾತೆಗೆ ವರ್ಗಾಯಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹಣಕಾಸು ಇಲಾಖೆ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.