ಬೆಂಗಳೂರು: ಸರ್ಕಾರದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಜರತ್ ಹಮೀದ್ ಷಾ ಹಾಗೂ ಹಜರತ್ ಶಾ ಖಾದ್ರಿ ವಕ್ಫ್ ಬೋರ್ಡ್ಗೆ ಸರ್ಕಾರದಿಂದ ಬಿಡುಗಡೆಯಾದ ಅನುದಾನವನ್ನು ಪದಾಧಿಕಾರಿಗಳು ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂಬ ಆರೋಪದಡಿ ನಾಲ್ವರ ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಸ್ಥೆಯ ಅಧ್ಯಕ್ಷರೂ ಆಗಿರುವ ನಿವೃತ್ತ ಡಿಸಿಪಿ ಜಿ.ಎ.ಬಾವಾ, ಜಂಟಿ ಕಾರ್ಯದರ್ಶಿ ಸೈಯದ್ ರಶೀದ್ ಅಹ್ಮದ್, ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಜಿಯಾವುಲ್ಲಾ ಷರೀಫ್, ಉಪಾಧ್ಯಕ್ಷ ಜಾವೀದ್ ಪಾಟೇಲ್ ವಿರುದ್ಧ ಪ್ರಕರಣ ದಾಖಲಾಗಿದೆ.
ಸಾಮಾಜಿಕ ಕಾರ್ಯಕರ್ತ ಅಲ್ಲಾ ಪಾಷಾ ಎಂಬುವವರು ದೂರು ನೀಡಿದ್ದು, ದೂರು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
ಕಬ್ಬನ್ಪೇಟೆ ರಸ್ತೆಯಲ್ಲಿ ಈ ವಕ್ಫ್ ಬೋರ್ಡ್ಕ ಚೇರಿಯಿದೆ. ಸಂಸ್ಥೆಯ ಅಧೀನದಲ್ಲಿ 128 ವಾಣಿಜ್ಯ ಮಳಿಗೆಗಳು, ಸಹಕಾರಿ ಬ್ಯಾಂಕ್ ಹಾಗೂ ಕಾಲೇಜು ಕಟ್ಟಡ, ಪಾರ್ಕಿಂಗ್ ಸ್ಥಳವಿದೆ. ಪ್ರತಿವರ್ಷ ₹1 ಕೋಟಿಗೂ ಅಧಿಕ ವರಮಾನವಿದೆ. ವಕ್ಫ್ ಬೋರ್ಡ್ ಈ ವರಮಾನದಲ್ಲಿ ಶೇ 7ರಷ್ಟನ್ನು ಸರ್ಕಾರಕ್ಕೆ ಸಂದಾಯ ಮಾಡಬೇಕು. ಆದಾಯವನ್ನು ಜಿ.ಎ.ಬಾವಾ, ರಶೀದ್ ಅಹ್ಮದ್ ಸೇರಿ ಹಲವರು ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿತ್ತು ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.