ADVERTISEMENT

ವರ್ಷದಲ್ಲಿ 103 ಎಕರೆ ಅರಣ್ಯ ಒತ್ತುವರಿ ತೆರವು: ಸಚಿವ ಈಶ್ವರ ಖಂಡ್ರೆ

₹3,000 ಕೋಟಿ ಮೌಲ್ಯದ ಜಮೀನು ಅರಣ್ಯ ಇಲಾಖೆ ಮರುವಶಕ್ಕೆ: ಖಂಡ್ರೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 0:30 IST
Last Updated 21 ಅಕ್ಟೋಬರ್ 2024, 0:30 IST
ಮಾರಸಂದ್ರದ ಸರ್ವೆ ನಂ.182ರಲ್ಲಿನ ಒತ್ತುವರಿಯನ್ನು ಭಾನುವಾರ ತೆರವು ಮಾಡಿ, ಸಸಿಗಳನ್ನು ನೆಡಲಾಯಿತು
ಮಾರಸಂದ್ರದ ಸರ್ವೆ ನಂ.182ರಲ್ಲಿನ ಒತ್ತುವರಿಯನ್ನು ಭಾನುವಾರ ತೆರವು ಮಾಡಿ, ಸಸಿಗಳನ್ನು ನೆಡಲಾಯಿತು   

ಬೆಂಗಳೂರು: ‘ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಒಂದು ವರ್ಷದಲ್ಲಿ ಸುಮಾರು ₹3,000 ಕೋಟಿ ಮೌಲ್ಯದ 103 ಎಕರೆ ಅರಣ್ಯ ಭೂಮಿ ಒತ್ತುವರಿಯನ್ನು ತೆರವು ಮಾಡಲಾಗಿದೆ’ ಎಂದು ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ತಿಳಿಸಿದರು.

ಯಲಹಂಕ ವ್ಯಾಪ್ತಿಯ ಮಾರಸಂದ್ರದಲ್ಲಿ ಒತ್ತುವರಿಯಾಗಿದ್ದ ಸುಮಾರು ₹40 ಕೋಟಿ ಮೌಲ್ಯದ 2 ಎಕರೆ 10 ಗುಂಟೆ ಭೂಮಿಯ ಒತ್ತುವರಿಯನ್ನು ಭಾನುವಾರ ತೆರವು ಮಾಡಲಾಗಿದ್ದು, ಕಾರ್ಯಾಚರಣೆಯ ನಂತರ ಮಾಧ್ಯಮಗಳಿಗೆ ಅವರು ಈ ಮಾಹಿತಿ ನೀಡಿದರು. 

‘ಮಾರಸಂದ್ರದ ಗಸ್ತು ಸರ್ವೆ ನಂ.182ರ 2 ಎಕರೆ 10 ಗುಂಟೆ ಜಮೀನನ್ನು ಭೈರಾರಡ್ಡಿ ಎಂಬುವವರು ಒತ್ತುವರಿ ಮಾಡಿಕೊಂಡಿದ್ದರು. ಈ ಸಂಬಂಧ ಬೆಂಗಳೂರು ನಗರ ವಿಭಾಗದ ಅರಣ್ಯಾಧಿಕಾರಿಗಳು ಎಫ್‌ಐಆರ್‌ ದಾಖಲಿಸಿದ್ದರು. ಅದರನ್ವಯ ಭಾನುವಾರ ಬೆಳಗ್ಗೆ ಸ್ಥಳಕ್ಕೆ ತೆರಳಿ ಜೆಸಿಬಿ ಯಂತ್ರಗಳನ್ನು ಬಳಸಿಕೊಂಡು ಒತ್ತುವರಿ ತೆರವು ಮಾಡಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ತೆರವು ಮಾಡಲಾದ ಅರಣ್ಯ ಭೂಮಿಯಲ್ಲಿ ಸಸಿಗಳನ್ನು ನೆಡಲಾಗಿದೆ. ಈ ಮೂಲಕ ಅರಣ್ಯ ಬೆಳೆಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇದೇ ಒಂದು ವರ್ಷದ ಅವಧಿಯಲ್ಲಿ ನಗರದ ವಿವಿಧೆಡೆ ಕಾರ್ಯಾಚರಣೆ ನಡೆಸಿ, ಅರಣ್ಯ ಭೂಮಿಯನ್ನು ಮರುವಶಕ್ಕೆ ಪಡೆಯಲಾಗಿದೆ. ಅಲ್ಲೆಲ್ಲಾ ಅರಣ್ಯೀಕರಣ ಚಟುವಟಿಕೆ ನಡೆಸಲಾಗಿದೆ’ ಎಂದರು.

‘ಕೊತ್ತನೂರು ವ್ಯಾಪ್ತಿಯ ಸರ್ವೆ ನಂ.48ರಲ್ಲಿ ಸುಮಾರು ₹700 ಕೋಟಿ ಮೌಲ್ಯದ 22 ಎಕರೆ 8 ಗುಂಟೆ ಅರಣ್ಯ ಭೂಮಿ ಒತ್ತುವರಿಯಾಗಿದೆ. ಅದನ್ನು ತೆರವು ಮಾಡಲು ಈಗಾಗಲೇ ಕಾನೂನು ಕ್ರಮ ಆರಂಭಿಸಲಾಗಿದೆ. ಶೀಘ್ರವೇ ಅದನ್ನು ಅರಣ್ಯ ಇಲಾಖೆಯ ಮರುವಶಕ್ಕೆ ಪಡೆಯಲಾಗುತ್ತದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.