ಬೆಂಗಳೂರು: ಬಾಲಕಿಯನ್ನು ಬಳಸಿಕೊಂಡು ಚಿನ್ನಾಭರಣ ಕಳವು ಮಾಡುತ್ತಿದ್ದ ಮಹಿಳೆಯೊಬ್ಬರನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಡಿ.ಜೆ. ಹಳ್ಳಿಯ ನೀಲೋಫರ್ ಅಲಿಯಾಸ್ ನೀಲು ಬಂಧಿತ ಆರೋಪಿ.
ಆರೋಪಿಯಿಂದ ₹4.9 ಲಕ್ಷ ಮೌಲ್ಯದ 70 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಆಟೊ ಜಪ್ತಿ ಮಾಡಲಾಗಿದೆ. ಇದೇ ಪ್ರಕರಣದಲ್ಲಿ ಇನ್ನೂ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ದಾಸರಹಳ್ಳಿಯ ಕಲ್ಯಾಣನಗರದಲ್ಲಿ ವ್ಯಕ್ತಿಯೊಬ್ಬರು ಮನೆಗೆ ಹೊಂದಿಕೊಂಡಂತೆಯೇ ಗೊಂಬೆಗಳ ಮಾರಾಟ ಅಂಗಡಿಯನ್ನು ಇಟ್ಟುಕೊಂಡಿದ್ಧಾರೆ. ಗ್ರಾಹಕರ ಸೋಗಿನಲ್ಲಿ ಪುರುಷರ ವೇಷದಲ್ಲಿ ನಾಲ್ವರು ಮಹಿಳೆಯರು ಅಂಗಡಿಗೆ ಬಂದಿದ್ದರು. ಜತೆಗೆ, ಬಾಲಕಿಯನ್ನೂ ಕರೆದುಕೊಂಡು ಬಂದಿದ್ದರು. ಮಾಲೀಕರ ಪುತ್ರಿ ಅಂಗಡಿಯಲ್ಲಿ ಇದ್ದರು. ದೊಡ್ಡವರನ್ನು ಅಂಗಡಿಗೆ ಕರೆಯುವಂತೆ ಹೇಳುತ್ತಾರೆ. ಆಕೆಯ ತಾಯಿ ಅಂಗಡಿಗೆ ಬಂದ ಮೇಲೆ ಬಾಲಕಿಯನ್ನು ಮನೆಗೆ ಕಳುಹಿಸಿ ಬೀರುವಿನಲ್ಲಿದ್ದ 125 ಗ್ರಾಂ ಚಿನ್ನಾಭರಣವನ್ನು ಕಳವು ಮಾಡಿದ್ದರು’ ಎಂದು ಪೊಲೀಸರು ಹೇಳಿದರು.
‘ಡಿ.ಜೆ ಹಳ್ಳಿಯ ಶಾಂಪೂರ ಬಸ್ ನಿಲ್ದಾಣದ ಬಳಿ ಆರೋಪಿಯನ್ನು ವಶಕ್ಕೆ ಪಡೆಯಲಾಯಿತು. ಆಕೆಯನ್ನು ವಿಚಾರಣೆ ನಡೆಸಿದಾಗ ಕೃತ್ಯ ಎಸಗಿದ್ದನ್ನು ಒಪ್ಪಿಕೊಂಡಿದ್ದಾಳೆ. ತಲೆಮರೆಸಿಕೊಂಡಿರುವ ಆರೋಪಿಗಳ ಬಳಿ 55 ಗ್ರಾಂ. ಚಿನ್ನಾಭರಣ ಇದೆ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.