ಬೆಂಗಳೂರು: ‘ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಹುದ್ದೆಗಳು ಕನ್ನಡಿಗರಿಗೆ ಸಿಗದೇ, ಉತ್ತರ ಭಾರತದವರ ಪಾಲಾಗುತ್ತಿವೆ’ ಎಂದು ವಿಶ್ವ ಒಕ್ಕಲಿಗರ ಮಠದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.
ಕರುನಾಡು ವಿಜಯ ಸೇನೆ ರಾಜ್ಯ ಘಟಕದಿಂದ ಆಯೋಜಿಸಿದ್ದ ‘ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇಕಡ 95ರಷ್ಟು ಅಂಕಗಳಿಸಿದ ವಿದ್ಯಾರ್ಥಿಗಳಿಗೆ’ ಪ್ರತಿಭಾ ಪುರಸ್ಕಾರ ವಿತರಿಸಿ ಅವರು ಮಾತನಾಡಿದರು.
‘ಕನ್ನಡಿಗರ ಉದ್ಯೋಗದ ಜೊತೆಗೆ ನಮ್ಮ ತೆರಿಗೆ ಪಾಲನ್ನು ಸಹ ಉತ್ತರ ಭಾರತದವರೇ ಪಡೆದುಕೊಳ್ಳುತ್ತಿದ್ದಾರೆ. ಆದ್ದರಿಂದ, ನಮ್ಮ ಜನಪ್ರತಿನಿಧಿಗಳು, ಸಂಘ–ಸಂಸ್ಥೆಗಳು ಪಕ್ಷಭೇದ ಮರೆತು ನಮ್ಮ ಹಕ್ಕನ್ನು ಕೇಳಿ ಪಡೆದುಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪಶ್ಚಾತ್ತಾಪ ಪಡಬೇಕಾದ ಪರಿಸ್ಥಿತಿ ಎದುರಾಗಲಿದೆ’ ಎಂದು ಹೇಳಿದರು.
ಶಾಸಕ ಸಿ. ಕೆ. ರಾಮಮೂರ್ತಿ ಮಾತನಾಡಿ, ‘ಇನ್ಫೊಸಿಸ್ ಕಂಪನಿಯಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗುತ್ತಿಲ್ಲ. ನಗರದಲ್ಲಿರುವ ಬಹುತೇಕ ಅಪಾರ್ಟ್ಮೆಂಟ್ಗಳಲ್ಲಿ ಅನ್ಯಭಾಷಿಕರು, ಉತ್ತರ ಭಾರತೀಯರೇ ವಾಸವಾಗಿದ್ದಾರೆ. ಅವರೆಲ್ಲರೂ ಕನ್ನಡ ಭಾಷೆಯನ್ನು ಕಲಿಯಬೇಕು. ಈ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಕನ್ನಡ ಹೋರಾಟಗಾರರಿಗೆ ಸಹಾಯ ಮಾಡಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.