ಬೆಂಗಳೂರು: ಶಿಕ್ಷಣ ಇಲಾಖೆಯು ಹೊಸ ಪರಿಕಲ್ಪನೆ ಅಡಿಯಲ್ಲಿ 4 ರಿಂದ 6 ವರ್ಷದ ಮಕ್ಕಳಿಗೆ 2,524 ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿ–ಯುಕೆಜಿ ಶಿಕ್ಷಣ ನೀಡಲು ಆದೇಶ ಹೊರಡಿಸಿರುವುದನ್ನು ‘ಐಸಿಡಿಎಸ್ ಉಳಿಸಿ ಮಕ್ಕಳನ್ನು ರಕ್ಷಿಸಿ’ ಆಂದೋಲನ ಸಮಿತಿ ಖಂಡಿಸಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮತನಾಡಿದ ಸಮಿತಿಯ ವಿಜಯಮ್ಮ, ಕೆ.ಎಸ್. ವಿಮಲಾ, ಎಚ್.ಎಸ್. ಸುನಂದಾ, ‘ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್ಕೆಜಿ–ಯುಕೆಜಿ ತರಗತಿಗಳನ್ನು ಪ್ರಾರಂಭಿಸಬೇಕು. ಕೇಂದ್ರದ ಹೆಸರು ಪೂರ್ವ ಪ್ರಾಥಮಿಕ ಶಿಕ್ಷಣ ಕೇಂದ್ರವೆಂದು ಬದಲಿಸಬೇಕು. ಇಲ್ಲಿನ ಕಾರ್ಯಕರ್ತರಿಗೆ ‘ಶಿಕ್ಷಕಿ’ಯರ ಸ್ಥಾನ ನೀಡಬೇಕು. ಐಸಿಡಿಎಸ್ನಲ್ಲಿರುವ ಆರಂಭಿಕ ಆರೈಕೆ ಮತ್ತು ಶಿಕ್ಷಣಕ್ಕೆ (ಇಸಿಸಿಇ) ಅನುದಾನ ಹೆಚ್ಚಿಸಬೇಕು’ ಎಂದು ಒತ್ತಾಯಿಸಿದರು.
‘ಅಂಗನವಾಡಿ ಕಾರ್ಯಕರ್ತೆಯರಿಗೆ ನಿರಂತರ ಕೌಶಲ ತರಬೇತಿ ನೀಡುವ ಮೂಲಕ ಅಂಗನವಾಡಿ ಕೇಂದ್ರಗಳಲ್ಲಿಯೇ ಇಸಿಸಿಇ ಶಿಕ್ಷಣ ನೀಡಬೇಕು. ಶಿಕ್ಷಣ ಇಲಾಖೆಯಲ್ಲಿ ಅತಿಥಿ ಶಿಕ್ಷಕರಿಗೆ ನೀಡುವ ಗೌರವಧನ ಕಾರ್ಯಕರ್ತೆಯರಿಗೆ ಹೆಚ್ಚುವರಿಯಾಗಿ ನೀಡಬೇಕು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.