ರಾಜರಾಜೇಶ್ವರಿನಗರ: ‘ಮಾನವೀಯತೆ. ಸಮಾಜಮುಖಿ ಸೇವೆ. ಸಂಸ್ಕಾರ. ಗುರು ಹಿರಿಯರು. ಪೋಷಕರನ್ನು ಗೌರವಿಸುವುದನ್ನು ಕಲಿಸುವ ಶಿಕ್ಷಕ, ಶಿಕ್ಷಕಿಯರು ನಿಜವಾದ ದೇವರು’ ಎಂದು ಚಿತ್ರದುರ್ಗ ಭೋವಿ ಗುರು ಪೀಠಾಧ್ಯಕ್ಷ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿಜಿ ಹೇಳಿದರು.
ಲಗ್ಗೆರೆಯಲ್ಲಿ ಅರ್ಪಿತಾ ಸೇವಾ ಟ್ರಸ್ಟ್ ಹಮ್ಮಿಕೊಂಡಿದ್ದ 1400 ಶಿಕ್ಷಕರಿಗೆ ಗುರುವಂದನೆ, 100 ಶಿಕ್ಷಕರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ವಿಶ್ವದಲ್ಲಿ ಜಾತಿ ಕಲಹ, ದ್ವೇಷ, ಅಸೂಯೆ, ಮೋಸ, ವಂಚನೆ, ಜಾಸ್ತಿಯಾಗಿ ಎಲ್ಲೆಡೆ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೂಡಲಸಂಗಮ ಪಂಚಮಶಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ‘ಸ್ವಯಂ ಶಿಸ್ತು, ಸಮಯಪಾಲನೆ, ದೇಶಪ್ರೇಮ, ಪ್ರಜಾಪ್ರಭುತ್ವ ವ್ಯವಸ್ಥೆಯ ಎತ್ತಿ ಹಿಡಿಯುವ ಕೆಲಸಗಳಲ್ಲಿ ತೊಡಗಿಸಿಕೊಳ್ಳುವಂತೆ, ಸಾಮಾಜಿಕ ಪಿಡುಗುಗಳ ವಿರುದ್ಧ ಇರುವಂತೆ ಯುವ ಜನಾಂಗವನ್ನು ರೂಪಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕು’ ಎಂದು ಸಲಹೆ ನೀಡಿದರು.
ಕೆಪಿಸಿಸಿ ವಕ್ತಾರೆ ಎಚ್. ಕುಸುಮಾ, ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹನುಮಂತರಾಯಪ್ಪ, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಅರ್ಪಿತಾ ಸೇವಾ ಟ್ರಸ್ಟ್ ಅಧ್ಯಕ್ಷ ಲಗ್ಗೆರೆ ನಾರಾಯಣಸ್ವಾಮಿ. ಸಂತೋಷ್ ಸಿದ್ದೇಗೌಡ, ಪಾಲಿಕೆ ಮಾಜಿ ಸದಸ್ಯರಾದ ಮಂಜುಳಾ ನಾರಾಯಣಸ್ವಾಮಿ, ವೇಲು ನಾಯ್ಕರ್, ಸಿದ್ದೇಗೌಡ, ಆಶಾ ಸುರೇಶ್, ಬಿ.ಆರ್. ನಂಜುಂಡಪ್ಪ, ಪತ್ರಕರ್ತ ರಾಕೇಶ್ ಶೆಟ್ಟಿ, ಜಿ. ಮೋಹನ್ ಕುಮಾರ್, ಜಿ.ಎಂ. ಮಲ್ಲಿಕಾರ್ಜುನಯ್ಯ, ಕುಶಾಲ್ ಗೌಡ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.