ಬೆಂಗಳೂರು: ಪ್ರಭಾವಿಗಳು ಅರಣ್ಯದಿಂದಲೇ ಮರ ಕಳವು ಮಾಡಿದರೂ ಕಣ್ಣುಮುಚ್ಚಿ ಕುಳಿತಿರುವ ಅರಣ್ಯಾಧಿಕಾರಿಗಳು ರೈತರ ಜಮೀನಿನ ಮೇಲೆ ಕಣ್ಣು ಹಾಕಿದ್ದಾರೆ ಎಂದು ಕಗ್ಗಲೀಪುರ ಸೇರಿದಂತೆ ವಿವಿಧ ಗ್ರಾಮಗಳ ಜನರು ಆಕ್ರೋಶ ವ್ಯಕ್ತಪಡಿಸಿದರು.
ಅರಣ್ಯ ಇಲಾಖೆಯ ಅಧಿಕಾರಿಗಳು ರೈತರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಕಗ್ಗಲೀಪುರ ಅರಮನೆ ಮೈದಾನದಲ್ಲಿ ರೈತರು ಪ್ರತಿಭಟನಾ ಸಭೆ ನಡೆಸಿದರು.
ಗಿರಿಗೌಡದೊಡ್ಡಿ, ಸುಂಕದಕಟ್ಟೆ, ಮುಕೂಡ್ಲು, ಸೋಮನಹಳ್ಳಿ, ರಾಯರದೊಡ್ಡಿ, ರಾವುಗೋಡ್ಲು, ಕುಂಚಿಗೆರೆಪಾಳ್ಯ, ವಾಸುದೇವಪುರ, ಗುಟ್ಟೆಪಾಳ್ಯ, ನೆಟ್ಟಿಗೆರೆ, ಗುಳಕಮಳೆ, ವಡ್ಡರಪಾಳ್ಯ, ನಲ್ಲಕ್ಕನದೊಡ್ಡಿ, ಕಗ್ಗಲೀಪುರ, ಸೋಮಹಳ್ಳಿ, ನೆಲಗುಳಿ, ತರಳು ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ರೈತರನ್ನು ಒಕ್ಕಲೆಬ್ಬಿಸಲು ಅರಣ್ಯ ಇಲಾಖೆ ಒತ್ತಡ ಹಾಕುತ್ತಿದೆ. ತಾತಂದಿರ ಕಾಲದಿಂದಲೂ ಪಹಣಿ ಖಾತೆ ಇದ್ದರೂ ಅರಣ್ಯ ಭೂಮಿ ಎಂದು ನೋಟಿಸ್ ನೀಡುತ್ತಿದೆ. ಬೇರೆ ಕಡೆಗೆ ನಾವು ಹೋಗಲೇಬೇಕಿದ್ದರೆ ಒಳ್ಳೆಯ ಪ್ರದೇಶದಲ್ಲಿ ಜಮೀನು ನೀಡಿ ಎಂದು ಆಗ್ರಹಿಸಿದರು.
ಅಧಿಕಾರಿಗಳಿಗೆ ಅನ್ನ ತಿನ್ನುವಾಗ, ಇದನ್ನು ರೈತರು ನೀಡಿದ್ದು ಎನ್ನುವ ನೆನಪು ಇರಬೇಕು. ಒಳಗೆ ಅಂತಃಕರಣ ಇರಬೇಕು. ದಶಕಗಳಿಂದ ಪಹಣಿ ಇದ್ದರೂ ಕ್ಯಾತೆ ತೆಗೆಯಲು ನಿಮಗೆ ವೇತನ ನೀಡುತ್ತಿರುವುದಲ್ಲ ಎಂದು ತಿಳಿಸಿದರು.
ಅರಣ್ಯಾಧಿಕಾರಿಗಳು, ಗ್ರಾಮ ಪಂಚಾಯಿತಿ, ಸಂತ್ರಸ್ತರು, ಜನಪ್ರತಿನಿಧಿಗಳು ಸೇರಿ ಸಭೆ ನಡೆಸಿ ಸಮಸ್ಯೆಗಳ ಬಗ್ಗೆ ಚರ್ಚಿಸಲು ನಿರ್ಧರಿಸಲಾಯಿತು.
ರೈತ ಸಂಘದ ಅಧ್ಯಕ್ಷ ಪುಟ್ಟಸ್ವಾಮಿ, ಸೋಮನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋದಮ್ಮ ದಾಸಪ್ಪ, ಉಪಾಧ್ಯಕ್ಷ ಕೇಶವ, ನೆಲಗುಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್. ಸಂಪತ್ರಾಜು, ಸದಸ್ಯ ಶಿವದಾಳಯ್ಯ, ಮುಖಂಡರಾದ ಅಣ್ಣಯ್ಯಪ್ಪ, ಎ. ಶಿವಕುಮಾರ್, ನಾಗೇಶ್, ತಮ್ಮಯ್ಯ, ಅಂತೋನಿಸ್ವಾಮಿ, ನದೀಮ ಪಾಷ, ಸಿ. ಚಲುವಮೂರ್ತಿ, ಗುಂಡಪ್ಪ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.