ADVERTISEMENT

ವಿವಾಹಿತೆಗೆ ಕಿರುಕುಳ: ಮದುವೆಗೆ ಒಪ್ಪದಿದ್ದಕ್ಕೆ ಮನೆಗೆ ಬೆಂಕಿ

​ಪ್ರಜಾವಾಣಿ ವಾರ್ತೆ
Published 2 ಮೇ 2024, 19:24 IST
Last Updated 2 ಮೇ 2024, 19:24 IST
   

ಬೆಂಗಳೂರು: ತನ್ನನ್ನು ಮದುವೆಯಾಗಲು ಒಪ್ಪಲಿಲ್ಲವೆಂಬ ಕಾರಣಕ್ಕೆ ವಿವಾಹಿತ ಮಹಿಳೆಯೊಬ್ಬರ ಮನೆಗೆ ಬೆಂಕಿ ಹಚ್ಚಿ ಎಲೆಕ್ಟ್ರಾನಿಕ್ ವಸ್ತುಗಳು ಹಾಗೂ ಪೀಠೋಪಕರಣ ಸುಟ್ಟುಹಾಕಿದ್ದ ಆರೋಪದಡಿ ಅರ್ಬಾಜ್ (24) ಎಂಬುವವರನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಕಾಡುಗೊಂಡನಹಳ್ಳಿಯ (ಕೆ.ಜಿ.ಹಳ್ಳಿ) ಅರ್ಬಾಜ್, ಏಪ್ರಿಲ್ 11ರಂದು ಕೃತ್ಯ ಎಸಗಿ ಪರಾಗಿಯಾಗಿದ್ದ. ಮಹಿಳೆ ನೀಡಿದ್ದ ದೂರು ಆಧರಿಸಿ ಆರೋಪಿಯನ್ನು ಸೆರೆ ಹಿಡಿಯಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಆರೋಪಿ ಅರ್ಬಾಜ್, ದೂರುದಾರ ಮಹಿಳೆಯ ಸಂಬಂಧಿಕ. ಮಹಿಳೆಗೆ ಮದುವೆಯಾಗಿದ್ದು, ಅಷ್ಟಾದರೂ ಆರೋಪಿ ತನ್ನನ್ನು ಎರಡನೇ ಮದುವೆಯಾಗುವಂತೆ ಪೀಡಿಸುತ್ತಿದ್ದ. ಅದಕ್ಕೆ ಒಪ್ಪದ ಮಹಿಳೆ, ಪತಿಗೆ ವಿಷಯ ತಿಳಿಸಿದ್ದರು. ನಂತರ, ಹಿರಿಯರ ಸಮ್ಮುಖದಲ್ಲಿ ಆರೋಪಿಗೆ ಬುದ್ಧಿವಾದ ಹೇಳಲಾಗಿತ್ತು. ವಿವಾಹಿತೆ ಮಹಿಳೆ ತಂಟೆಗೆ ಹೋಗದಂತೆ ತಾಕೀತು ಮಾಡಲಾಗಿತ್ತು’ ಎಂದು ತಿಳಿಸಿದರು.

ADVERTISEMENT

‘ಹಳೇ ಚಾಳಿ ಮುಂದುವರಿಸಿದ್ದ ಆರೋಪಿ, ಮಹಿಳೆಯನ್ನು ಹಿಂಬಾಲಿಸಲಾರಂಭಿಸಿದ್ದ. ಮದುವೆಯಾಗುವಂತೆ ಪುನಃ ಪೀಡಿಸಲಾರಂಭಿಸಿದ್ದ. ದೂರುದಾರ ಮಹಿಳೆ ಹಾಗೂ ಕುಟುಂಬದವರು, ಏಪ್ರಿಲ್ 10ರಂದು ರಾತ್ರಿ ಸಂಬಂಧಿಕರ ಮನೆಗೆ ಹೋಗಿದ್ದರು. ಮನೆಯಲ್ಲಿ ಯಾರೂ ಇರಲಿಲ್ಲ. ಏಪ್ರಿಲ್ 11ರಂದು ನಸುಕಿನಲ್ಲಿ ಮನೆಗೆ ಬಂದಿದ್ದ ಆರೋಪಿ, ಬೆಂಕಿ ಹಚ್ಚಿ ಪರಾರಿಯಾಗಿದ್ದ. ಬೆಂಕಿ ನೋಡಿದ್ದ ಅಕ್ಕ–ಪಕ್ಕದ ಮನೆಯವರು ದೂರುದಾರ ಮಹಿಳೆಗೆ ವಿಷಯ ತಿಳಿಸಿದ್ದರು. ಅವರು ಮನೆಗೆ ಬರುವಷ್ಟರಲ್ಲಿ ಎಲೆಕ್ಟ್ರಾನಿಕ್ ವಸ್ತುಗಳು ಹಾಗೂ ಪೀಠೋಪಕರಣ ಸುಟ್ಟುಹೋಗಿದ್ದವು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.