ದಾಬಸ್ ಪೇಟೆ: ಸೋಂಪುರ ಹೋಬಳಿಯ ಹೊನ್ನೇನಹಳ್ಳಿ ಗ್ರಾಮ ಪಂಚಾಯಿತಿಯ 2023-24ನೇ ಸಾಲಿನ ಗ್ರಾಮಸಭೆ ಹಾಗೂ ಮಕ್ಕಳ ಗ್ರಾಮಸಭೆಗೆ ಬಹುತೇಕ ಅಧಿಕಾರಿಗಳು ಗೈರಾಗಿದ್ದರು.
29 ಇಲಾಖೆಗಳ ಪೈಕಿ ಕೇವಲ 6 ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು. ಸಾರ್ವಜನಿಕರ ಸಂಖ್ಯೆಯೂ ಕಡಿಮೆ ಇತ್ತು. ವೀರಸಾಗರ, ಹೊನ್ನೇನಹಳ್ಳಿಯ ಹಾಗೂ ಗೊಲ್ಲರಹಟ್ಟಿ ಶಾಲೆಯ ಮಕ್ಕಳು, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.
‘ಗ್ರಾಮಸಭೆ ಹಾಗೂ ಮಕ್ಕಳ ಗ್ರಾಮಸಭೆಗೆ ಸಾವಿರಾರು ರೂಪಾಯಿ ಹಣ ಖರ್ಚಾಗುತ್ತದೆ. ಅದು ಸದ್ಬಳಕೆಯಾಗುತ್ತಿಲ್ಲ. ಗ್ರಾಮಸಭೆಯ ಬಗ್ಗೆ ಸರಿಯಾದ ಪ್ರಚಾರ ನಡೆಸಬೇಕು, ಅಧಿಕಾರಿಗಳನ್ನು ಕರೆಸಬೇಕು. ಆಗ ಜನರು ಸೇರುತ್ತಾರೆ. ಇಲ್ಲವಾದರೆ ಗ್ರಾಮಸಭೆ ಮಾಡಿ ಏನು ಪ್ರಯೋಜನ’ ಎಂದು ವೀರಸಾಗರ ಗ್ರಾಮಸ್ಥ ನರಸಿಂಹಯ್ಯ ಪ್ರಶ್ನಿಸಿದರು.
ಪಂಚಾಯಿತಿ ಆಡಳಿತ ವರ್ಷಕ್ಕೆ ಎರಡು ಬಾರಿ ಗ್ರಾಮಸಭೆ ಮಾಡಬೇಕು. ರೈತರು ಹೊಲದ ಕೆಲಸ ಕಾರ್ಯಗಳಲ್ಲಿ ನಿರತರಾಗಿರುವ ಸಮಯದಲ್ಲಿ ಗ್ರಾಮಸಭೆ ಮಾಡಿದರೆ ಯಾರೂ ಬರುವುದಿಲ್ಲ ಎಂದು ಭಾನುಪ್ರಕಾಶ್ ತಿಳಿಸಿದರು.
ಗ್ರಾಮಸಭೆಗಳನ್ನು ಕೇಂದ್ರ ಸ್ಥಾನದಲ್ಲಿ ಮಾಡಿದರೆ ಅಧಿಕಾರಿಗಳು ಹಾಜರಾಗುತ್ತಾರೆ. ಜನರೂ ಸೇರುತ್ತಾರೆ. ಸರಿಯಾದ ಸಿದ್ಧತೆಗಳಿಲ್ಲದೇ ಕಾಟಾಚಾರಕ್ಕೆ ಗ್ರಾಮ ಸಭೆ ನಡೆಸಲಾಗುತ್ತಿದೆ ಎಂದು ಬರಗೇನಹಳ್ಳಿ ನಿವಾಸಿ ಮಂಜುನಾಥ ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮಸಭೆಯಲ್ಲಿ ಪಂಚಾಯಿತಿ ಅಧ್ಯಕ್ಷೆ ಉಮಾದೇವಿ ಹನುಮಂತರಾಯಪ್ಪ, ಉಪಾಧ್ಯಕ್ಷ ಎಚ್.ಟಿ. ರಾಜೇಶ ಕುಮಾರ, ಪಿಡಿಒ ಆರ್. ಮಂಜಮ್ಮ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.