ಬೆಂಗಳೂರು: ಚಾಣಕ್ಯ ವಿಶ್ವವಿದ್ಯಾಲಯದ ವಿವಿಧ ಉದ್ದೇಶಗಳ ಸುಸ್ಥಿರ ಅಭಿವೃದ್ಧಿ ಕೇಂದ್ರಕ್ಕೆ ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ (ಬಿಐಸಿ) ಬುಧವಾರ ಚಾಲನೆ ನೀಡಲಾಯಿತು. ಆ್ಯಕ್ಸೆಲ್ ಸಂಸ್ಥಾಪಕ ಪಾಲುದಾರ ಪ್ರಶಾಂತ್ ಪ್ರಕಾಶ್ ಮತ್ತು ‘ಝೆರೋಧ’ ಸಹ ಸಂಸ್ಥಾಪಕ ನಿತಿನ್ ಕಾಮತ್ ಉದ್ಘಾಟಿಸಿದರು.
ಜೈವಿಕ ಅಧ್ಯಯನದ ಕುರಿತು ಕ್ಲಿಷ್ಟಕರ ಸಮಸ್ಯೆಗಳ ನಿರ್ಮೂಲನೆ, ಭಾರತೀಯ ಜ್ಞಾನ ಪರಂಪರೆ ಹಾಗೂ ಸಾಂಸ್ಕೃತಿಕ ಮೂಲಗಳ ಆಧಾರಿತ ಮಾನವ ಸ್ವಭಾವದ ಬದಲಾವಣೆ, ಸಾಂಸ್ಕೃತಿಕ ಹಾಗೂ ಜನ ಸಮೂಹದ ಜೀವನ ಪದ್ಧತಿಗಳ ಕುರಿತ ಸಂಶೋಧನೆ ಹಾಗೂ ಅದರ ಪ್ರಸಾರ ಮಾಡುವುದು ಕೇಂದ್ರದ ಉದ್ದೇಶ ಎಂದು ಪ್ರಶಾಂತ್ ಪ್ರಕಾಶ್ ತಿಳಿಸಿದರು.
ಭವಿಷ್ಯದ ದೃಷ್ಟಿಕೋನದಿಂದ ಪರಿವರ್ತನಾ ರಾಯಭಾರಿಗಳನ್ನು ಗ್ರಾಮೀಣ ಮಟ್ಟದಲ್ಲಿ ಸ್ಥಾಪಿಸಿ ಬದಲಾವಣೆಯ ವೇಗವರ್ಧಕರನ್ನಾಗಿ ಬಳಸುವುದು. ಸುಸ್ಥಿರ ಅಭಿವೃದ್ಧಿಯ ಭವಿಷ್ಯದ ಆಯಾಮಗಳ ಕುರಿತು ಹೊಸ ನೀತಿಗಳನ್ನು ರಾಜ್ಯ ಸರ್ಕಾರದ ಜೊತೆಯಲ್ಲಿ ರೂಪಿಸುವುದು. ಜೊತೆಗೆ ಕಾಲ ಕಾಲಕ್ಕೆ ವಿವಿಧ ಚಟುವಟಿಕೆಗಳನ್ನು ನಡೆಸುವುದು ಸುಸ್ಥಿರ ಅಭಿವೃದ್ಧಿ ಕೇಂದ್ರದ ಉದ್ದೇಶವಾಗಿದೆ ಎಂದು ವಿವರಿಸಿದರು.
ಚಾಣಕ್ಯ ವಿಶ್ವವಿದ್ಯಾಲಯದ ಕುಲಾಧಿಪತಿ ಎಂ.ಕೆ. ಶ್ರೀಧರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಸುಸ್ಥಿರ ಭವಿಷ್ಯದ ಸೃಷ್ಟಿಯಲ್ಲಿ ಕ್ರಿಯಾಶೀಲ, ಸಂಶೋಧನೆ ಹಾಗೂ ಪರಿಹಾರ ಸೂಚಿಸುವ ಸಾಮರ್ಥ್ಯವನ್ನು ಹೊಂದುವಂತಾಗಬೇಕು. ಸಮಾಜದ ಎಲ್ಲ ಸ್ತರದ ವ್ಯಕ್ತಿಗಳು ಒಟ್ಟಾಗಿ ಕಾರ್ಯೋನ್ಮುಖರಾಗುವುದರಿಂದ ಬಹಳಷ್ಟು ಸಮಸ್ಯಗಳಿಗೆ ಪರಿಹಾರಗಳನ್ನು ಪಡೆಯಬಹುದು. ಆರೋಗ್ಯಕರ ಹಾಗೂ ಸಮತೋಲಿತ ವಿಶ್ವವನ್ನು ಸೃಷ್ಟಿಸುವುದು ಸುಸ್ಥಿರ ಅಭಿವೃದ್ಧಿ ಕೇಂದ್ರದ ಗುರಿ’ ಎಂದು ತಿಳಿಸಿದರು.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವ್ಯವಸ್ಥಾಪಕ ನಿರ್ದೇಶಕ ಹರಿ ಕೆ. ಮಾರರ್, ಇಂಫಾಲ್ ಕೇಂದ್ರೀಯ ಕೃಷಿ ವಿಶ್ವವಿದ್ಯಾಲಯದ ಕುಲಾಧಿಪತಿ ಸುಬ್ಬಣ್ಣ ಅಯ್ಯಪ್ಪನ್, ಚಾಣಕ್ಯ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಎಂ.ಪಿ. ಕುಮಾರ್, ಕುಲಪತಿ ಯಶವಂತ ಡೋಂಗ್ರೆ, ಎಚ್.ಎಸ್. ಅಶೋಕ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾಗರಾಜ್ ರೆಡ್ಡಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.