ಯಲಹಂಕ: ಮೈಲಪ್ಪನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಸೀತಾರಾಮ ದೇವಾಲಯದ ಉದ್ಘಾಟನೆ ಹಾಗೂ ಲಕ್ಷ್ಮಣ , ಆಂಜನೇಯಸ್ವಾಮಿ ಸಮೇತ ಸೀತಾರಾಮ ಮೂರ್ತಿಗಳ ಪ್ರಾಣಪ್ರತಿಷ್ಠಾಪನೆಯನ್ನು ಗುರುವಾರ ನೆರವೇರಿಸಲಾಯಿತು.
ಬೆಳಗ್ಗೆಯಿಂದಲೇ ಸ್ವಾಮಿಗೆ ಅಭಿಷೇಕ ಸೇರಿದಂತೆ ವಿವಿಧ ಪೂಜೆ, ಹೋಮ–ಹವನಗಳನ್ನು ನೆರವೇರಿದವು. ಇದಕ್ಕೂ ಮುನ್ನ ಬ್ರಹ್ಮರಥವನ್ನು ಗ್ರಾಮದ ನೂರಾರು ಮಹಿಳೆಯರು ಪೂರ್ಣಕುಂಭ ಕಳಶದೊಂದಿಗೆ ಸ್ವಾಗತಿಸಿದರು.
ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿ, ‘ಮೈಲಪ್ಪನಹಳ್ಳಿ ಗ್ರಾಮದ ಕೆರೆಯ ಪಕ್ಕದಲ್ಲಿ ಪ್ರಶಾಂತವಾದ ವಾತಾವರಣದಲ್ಲಿ ಸೀತಾರಾಮರ ದೇವಸ್ಥಾನವನ್ನು ಪೂರ್ಣವಾಗಿ ವಿಶೇಷ ರೀತಿಯ ಕಲ್ಲುಗಳಿಂದ ನಿರ್ಮಿಸಲಾಗಿದೆ. ಮೂರ್ತಿಗಳು ಸುಂದರವಾಗಿ ಮೂಡಿಬಂದಿದ್ದು, ರಥವನ್ನು ಉಡುಪಿಯಲ್ಲಿ ನಿರ್ಮಿಸಿ ತರಲಾಗಿದೆ. ಭವಿಷ್ಯದಲ್ಲಿ ಈ ದೇವಸ್ಥಾನವು ಪ್ರವಾಸಿ ತಾಣವಾಗಿ ಮಾರ್ಪಾಡಾಗಲಿದೆ’ ಎಂದು ತಿಳಿಸಿದರು.
ಮೈಸೂರು ಪರಕಾಲ ಮಠದ ಅಭಿನವ ವಾಗೀಶ ಬ್ರಹ್ಮತಂತ್ರ ಪರಕಾಲ ಸ್ವಾಮೀಜಿ, ವ್ಯವಸ್ಥಾಪಕ ಟ್ರಸ್ಟಿ ಶ್ರೀನಿವಾಸ ರಾಘವನ್, ಸಿಂಗನಾಯಕನಹಳ್ಳಿ ರೈತರ ಸೇವಾ ಸಹಕಾರ ಬ್ಯಾಂಕಿನ ಅಧ್ಯಕ್ಷೆ ವಾಣಿಶ್ರೀ ವಿಶ್ವನಾಥ್, ಗ್ರಾಮ ಪಂಚಾಯಿತಿ ಸದಸ್ಯರಾದ ಎನ್.ಹರೀಶ್, ಎಸ್.ಜಿ.ಪ್ರಶಾಂತ್ ರೆಡ್ಡಿ, ಶೋಭಾ ಗೋಪಾಲ್, ಮಾಜಿ ಅಧ್ಯಕ್ಷರಾದ ಟಿ.ಮುನಿರೆಡ್ಡಿ, ಚಂದ್ರಣ್ಣ, ಮಾಜಿ ಸದಸ್ಯ ರಾಮಚಂದ್ರಪ್ಪ, ಬಿಜೆಪಿ ಮುಖಂಡರಾದ ದಿಬ್ಬೂರು ಜಯಣ್ಣ, ಎಸ್.ಎನ್.ರಾಜಣ್ಣ, ಗ್ರಾಮದ ಮುಖಂಡರಾದ ಜಿ.ವಿ.ಪ್ರಸಾದ್, ಗಜೇಂದ್ರ, ನಾರಾಯಣಪ್ಪ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.