ಯಲಹಂಕ: ಥಣಿಸಂದ್ರ–ನಾಗವಾರ ಮುಖ್ಯರಸ್ತೆಯ ಎಂ.ಎಸ್. ರಾಮಯ್ಯ ನಾರ್ಥ್ ಸಿಟಿ ಸಮೀಪದಲ್ಲಿ ನಡೆಯುತ್ತಿರುವ ರಾಜಕಾಲುವೆ ಕಾಮಗಾರಿಯ ಪ್ರಗತಿಯನ್ನು ಕಂದಾಯ ಸಚಿವ ಕೃಷ್ಣಬೈರೇಗೌಡ ಪರಿಶೀಲನೆ ನಡೆಸಿದರು.
‘ಥಣಿಸಂದ್ರ ವಾರ್ಡ್ ವ್ಯಾಪ್ತಿಯ ಮಾನ್ಯತಾ ಟೆಕ್ ಪಾರ್ಕಿನ ಕೆಳಭಾಗದಲ್ಲಿ ಪ್ರತಿಬಾರಿ ಮಳೆ ಸುರಿದ ಸಂದರ್ಭದಲ್ಲಿ ಪ್ರವಾಹ ಉಂಟಾಗುತ್ತದೆ. ಮಾನ್ಯತಾ ಟೆಕ್ ಪಾರ್ಕ್ ಒಳಗೆ ಮತ್ತು ಹಿಂದಿರುವ ಮೂರ್ನಾಲ್ಕು ಕಿಲೋಮೀಟರ್ ವ್ಯಾಪ್ತಿಯವರೆಗೆ ಮನೆಗಳಿಗೆ ನೀರು ನುಗ್ಗುತ್ತಿದೆ. ಇದಕ್ಕೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ಕೆಳಭಾಗದಲ್ಲಿರುವ ರಾಜಕಾಲುವೆಯ ವಿಸ್ತರಣೆ ಕಾಮಗಾರಿಯನ್ನು ₹ 10 ಕೋಟಿ ವೆಚ್ಛದಲ್ಲಿ ಕೈಗೊಳ್ಳಲಾಗಿದೆ’ ಎಂದು ಸಚಿವರು ತಿಳಿಸಿದರು.
ಮಾನ್ಯತಾದಲ್ಲಿ ಕಿರಿದಾಗಿದ್ದ ಕಾಲುವೆಯನ್ನು ಈಗಾಗಲೇ ವಿಸ್ತರಿಸಲಾಗಿದೆ. ಕೆಳಭಾಗದಲ್ಲಿ ಈಗ ಕೇವಲ 25 ಅಡಿಗಳಷ್ಟು ವಿಸ್ತೀರ್ಣದ ಕಾಲುವೆ ಇದೆ., ನಕಾಶೆ ಪ್ರಕಾರ 60 ಅಡಿ ಅಗಲದ ಕಾಲುವೆ ಇರಬೇಕಿತ್ತು. ನಕಾಶೆ ಪ್ರಕಾರವೇ ಕಾಲುವೆ ನಿರ್ಮಾಣ ಮಾಡುವುದು ಈ ಕಾಮಗಾರಿಯ ಉದ್ದೇಶ. ಒತ್ತುವರಿ ಮಾಡಿಕೊಂಡವರು ತಕರಾರು ಮಾಡದೇ ಜಾಗ ಬಿಟ್ಟುಕೊಟ್ಟು ಸಹಕರಿಸಬೇಕು ಎಂದು ಮನವಿ ಮಾಡಿದರು.
ಥಣಿಸಂದ್ರ ಗ್ರಾಮದಲ್ಲಿ ಪ್ರಗತಿಯಲ್ಲಿರುವ ಅಂಗನವಾಡಿ ಕಟ್ಟಡದ ಕಾಮಗಾರಿಯನ್ನೂ ಸಚಿವರು ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.