ADVERTISEMENT

ಮಾ. 22ರಿಂದ ಬೆಂಗಳೂರು ಅಂತರರಾಷ್ಟ್ರೀಯ ಕಲಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2024, 1:15 IST
Last Updated 16 ಮಾರ್ಚ್ 2024, 1:15 IST
ಸುಮಾ ಸುಧೀಂದ್ರ
ಸುಮಾ ಸುಧೀಂದ್ರ   

ಬೆಂಗಳೂರು: ಏಮ್ ಸಂಸ್ಥೆಯು ಪಂಡಿತ್ ಕುಮಾರ್ ಗಂಧರ್ವ ಅವರ ಜನ್ಮ ಶತಮಾನೋತ್ಸವದ ಪ್ರಯುಕ್ತ ಇದೇ 22ರಿಂದ 31ರವರೆಗೆ 16ನೇ ಆವೃತ್ತಿಯ ಬೆಂಗಳೂರು ಅಂತರರಾಷ್ಟ್ರೀಯ ಕಲಾ ಮಹೋತ್ಸವ ಹಮ್ಮಿಕೊಂಡಿದೆ. 

ವೀಣಾ ವಾದಕಿ ಸುಮಾ ಸುಧೀಂದ್ರ ಹಾಗೂ ನೃತ್ಯ ಕಲಾವಿದೆ ವೀಣಾ ಮೂರ್ತಿ ವಿಜಯ್ ಅವರು ಈ ಮಹೋತ್ಸವದ ನಿರ್ದೇಶಕರಾಗಿದ್ದಾರೆ. 20ರಿಂದ 24ರವರೆಗೆ ಮಲ್ಲೇಶ್ವರದ ಚೌಡಯ್ಯ ಸ್ಮಾರಕ ಸಭಾಂಗಣ ಹಾಗೂ 30ರಂದು ರೇಸ್‌ ಕೋರ್ಸ್‌ ರಸ್ತೆಯಲ್ಲಿರುವ ಭಾರತೀಯ ವಿದ್ಯಾಭವನದಲ್ಲಿ ಮಹೋತ್ಸವದ ಕಾರ್ಯಕ್ರಮಗಳು ನಡೆಯಲಿವೆ.

22ರಂದು ಸಂಜೆ 6 ಗಂಟೆಗೆ ಕಲಾ ಮಹೋತ್ಸವ ಉದ್ಘಾಟನೆಯಾಗಲಿದೆ. 6.30ರಿಂದ ಕೊಳಲು ವಾದಕ ರೋಣು ಮುಜುಮ್ದಾರ್, ವೀಣಾ ವಾದಕಿ ಸುಮಾ ಸುಧೀಂದ್ರ, ತಬಲಾ ವಾದಕ ರಾಜೇಂದ್ರ ನಾಕೋಡ್, ಘಟ ವಾದಕ ಎಸ್‌.ಎನ್. ನಾರಾಯಣಮೂರ್ತಿ ಹಾಗೂ ಮೃದಂಗ ವಾದಕ ಬಿ.ಸಿ. ಮಂಜುನಾಥ್ ಅವರಿಂದ ಜುಗಲ್ ಬಂದಿ ನಡೆಯಲಿದೆ. 7.45ರಿಂದ ಅಭಿಷೇಕ್ ರಘುರಾಮ್, ಎಚ್‌.ಎಂ. ಸ್ಮಿತಾ, ಅರ್ಜುನ್ ಕುಮಾರ್ ಹಾಗೂ ಜಿ. ಗುರುಪ್ರಸನ್ನ ಅವರಿಂದ ಕರ್ನಾಟಕ ಸಂಗೀತ ಕಛೇರಿ ನಡೆಯಲಿದೆ. 23ರಂದು ಸಂಜೆ 6 ಗಂಟೆಗೆ ನವದೆಹಲಿಯ ರಮಾ ವೈದ್ಯನಾಥನ್ ಮತ್ತು ತಂಡದಿಂದ ‘ಪ್ರತಿಬೋಧನಾ’ ಶೀರ್ಷಿಕೆಯಡಿ ನೃತ್ಯ ಪ್ರದರ್ಶನ ನಡೆಯಲಿದೆ. 7.15ರಿಂದ ‘ಸಿಲಪ್ಪದಿಕಾರಂ’ ನೃತ್ಯ ರೂಪಕ ಪ್ರದರ್ಶನ ಕಾಣಲಿದೆ.

ADVERTISEMENT

24ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 1 ಗಂಟೆಯವರೆಗೆ ವಿಧುಲಾ ವೇಣುಗೋಪಾಲ್ ಮತ್ತು ತಂಡದಿಂದ ಹಿಂದೂಸ್ತಾನಿ ಸಂಗೀತ ಕಛೇರಿ, ನಾಗರಾಜ್ ರಾವ್ ಹವಾಲ್ದಾರ್ ಮತ್ತು ತಂಡದಿಂದ ‘ಹಿಂದೂಸ್ತಾನಿ ಸಂಗೀತಕ್ಕೆ ಪಂಡಿತ್ ಕುಮಾರ್ ಗಂಧರ್ವ ಅವರ ಕೊಡುಗೆ’ ವಿಷಯದ ಬಗ್ಗೆ ಉಪನ್ಯಾಸ ಹಾಗೂ ಸಂಗೀತಾ ಕಟ್ಟಿ ಮತ್ತು ತಂಡದಿಂದ ಹಿಂದೂಸ್ತಾನಿ ಸಂಗೀತ ಕಛೇರಿ ನಡೆಯಲಿದೆ. ಸಂಜೆ 6ರಿಂದ ಸತ್ಯಜಿತ್ ಸಂಜು ಅವರಿಂದ ಹಾರ್ಮೋನಿಯಂ ವಾದನ, ಚಂದನ ಬಾಲ ಕಲ್ಯಾಣ್ ಅವರಿಂದ ಭಕ್ತಿ ಸಂಗೀತ ಹಾಗೂ ಆದರ್ಶ ಶೆಣೈ ಅವರಿಂದ ತಬಲಾ ವಾದನ ನಡೆಯಲಿದೆ. ಸಂಜೆ 7 ಗಂಟೆಗೆ ವೆಂಕಟೇಶ್ ಕುಮಾರ್ ಮತ್ತು ತಂಡದಿಂದ ಹಿಂದೂಸ್ತಾನಿ ಸಂಗೀತ ಕಛೇರಿ ನಡೆಯಲಿದೆ. 

ವೆಂಕಟೇಶ್‌ ಕುಮಾರ್ 

ಮಾ.30ರಂದು ಸಂಜೆ 6.30ಕ್ಕೆ ಗಾಯಕ ಭುವನೇಶ್ ಕೊಮ್ಕಲಿ, ತಬಲಾ ವಾದಕ ಕೇಶವ್ ಜೋಶಿ ಹಾಗೂ ಹಾರ್ಮೋನಿಯಂ ವಾದಕ ವ್ಯಾಸಮೂರ್ತಿ ಕಟ್ಟಿ ಅವರಿಂದ ಹಿಂದೂಸ್ತಾನಿ ಸಂಗೀತ ಕಛೇರಿ ಹಮ್ಮಿಕೊಳ್ಳಲಾಗಿದೆ.  

ಸಂಗೀತ–ನೃತ್ಯ ಕಾರ್ಯಕ್ರಮಗಳ ಟಿಕೆಟ್‌ಗಳು ಬುಕ್‌ ಮೈ ಶೊದಲ್ಲಿ ದೊರೆಯಲಿವೆ. ವಿವರಕ್ಕೆ 8050209838ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಸಿದೆ. 

ಸಂಗೀತಾ ಕಟ್ಟಿ
ಗ್ರೀನ್‌ಪಾತ್‌ ಲೊಗೊ

ಗಿಡನೆಡುವ ಕಾರ್ಯಕ್ರಮ

ಅಂತರರಾಷ್ಟ್ರೀಯ ಕಲಾ ಮಹೋತ್ಸವದ ಕೊನೆಯದಿನವಾದ ಮಾ.31ರಂದು ಬೆಳಿಗ್ಗೆ 10.30ಕ್ಕೆ ‘ಗ್ರೀನ್‌ಪಾತ್‌‘ ಸಂಸ್ಥೆ ನೆಲಮಂಗಲದ ಸಮೀಪದ ಮರಸರಹಳ್ಳಿಯಲ್ಲಿರುವ ತನ್ನ ’ಸುಕೃಷಿ ಸಾವಯವ ತೋಟ’ದಲ್ಲಿ ಕಾಲೇಜು ವಿದ್ಯಾರ್ಥಿಗಳೊಂದಿಗೆ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.