ಬೆಂಗಳೂರು: ಮನೆ ಎದುರು ಚಪ್ಪಲಿ ಸ್ಟ್ಯಾಂಡ್ ಇರಿಸುವ ವಿಚಾರಕ್ಕೆ ಅಕ್ಕಪಕ್ಕದ ಮನೆಯವರ ನಡುವೆ ಆರಂಭವಾದ ಗಲಾಟೆ ಪೊಲೀಸ್ ಠಾಣಾ ಮೆಟ್ಟಿಲೇರಿದೆ.
ಪ್ರಣಬ್ ಜ್ಯೋತಿ ಸಿಂಗ್ ಹಾಗೂ ನೇಹಾ ದಂಪತಿ ವಿರುದ್ಧ ಮಂಜುನಾಥ್ ಹಾಗೂ ಸರಿತಾ ದಂಪತಿ ಬೊಮ್ಮನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿರುವ ಪೊಲೀಸರು ಎನ್ಸಿಆರ್ ದಾಖಲಿಸಿಕೊಂಡಿದ್ದಾರೆ.
‘ಮನೆಯ ಎದುರು ಪ್ರಣಬ್ ಹಾಗೂ ನೇಹಾ ದಂಪತಿ ನೆಲೆಸಿದ್ದು ನಮ್ಮನ್ನು ಮನೆ ಬಿಟ್ಟು ಓಡಿಸುವ ಸಲುವಾಗಿ ಬೆದರಿಕೆ ಹಾಕುತ್ತಿದ್ದಾರೆ. ಅಲ್ಲದೇ ಮಾನಸಿಕ ಹಿಂಸೆ ನೀಡುತ್ತಿದ್ದಾರೆ’ ಎಂದು ಕೋಡಿಚಿಕ್ಕನಹಳ್ಳಿ ಚೈತನ್ಯ ಪ್ಯಾರಡೈಸ್ ಅಪಾರ್ಟ್ಮೆಂಟ್ನಲ್ಲಿ ನೆಲೆಸಿರುವ ಎನ್.ಬಿ.ಮಂಜುನಾಥ್ ಅವರು ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.
‘ಇದೇ ವಿಚಾರವಾಗಿ ಠಾಣೆಗೆ ಎರಡು ಬಾರಿ ದೂರು ನೀಡಿದ್ದೇನೆ. ಮಾರ್ಚ್ 27ರಂದು ರಾತ್ರಿ 9 ಗಂಟೆ ಸುಮಾರಿಗೆ ಮನೆ ಎದುರು ಹಾಕಲಾಗಿದ್ದ ರಂಗೋಲಿಯನ್ನು ಅಳಿಸಿ ಹಾಕಿದ್ದಾರೆ. ಚಪ್ಪಲಿ ಸ್ಟ್ಯಾಂಡ್ ಅನ್ನು ಕಾಲಿನಿಂದ ಒದ್ದು ಬೀಳಿಸಿದ್ದಾರೆ. ಆದರೂ ನಾವು ಸುಮ್ಮನಿದ್ದೆವು. ಪದೇ ಪದೇ ನಮಗೆ ತೊಂದರೆ ನೀಡುತ್ತಿದ್ದಾರೆ’ ಎಂದು ದೂರಿನಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.