ಬೆಂಗಳೂರು: ‘ಹಿಂದುಳಿದ ವರ್ಗದವರು ಅವಕಾಶಗಳಿಂದ ವಂಚಿತರಾಗುತ್ತಿರುವ ಬಗ್ಗೆ ಕಮಲಾ ಹಂಪನಾ ಅವರಿಗೆ ನೋವು ಇತ್ತು. ಅವರು ಜಾತಿ, ಧರ್ಮ ಮೀರಿದ ವ್ಯಕ್ತಿತ್ವವನ್ನು ಹೊಂದಿದ್ದರು’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ನೆನಪು ಮಾಡಿಕೊಂಡರು.
ನಗರದಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿ ಆಯೋಜಿಸಿದ್ದ ಸಾಹಿತಿಗಳಾದ ಕಮಲಾ ಹಂಪನಾ, ಖಲೀಲ್ ಉರ್ ರೆಹಮಾನ್, ಲಕ್ಕೂರು ಆನಂದ ಅವರ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಮಲಾ ಹಂಪನಾ ಅವರ ಕುಟುಂಬವೇ ಬಹುತ್ವದ ಕುಟುಂಬವಾಗಿತ್ತು. ಎಲ್ಲ ಸಮುದಾಯಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು ಎಂದು ತಿಳಿಸಿದರು.
ಖಲೀಲ್ ಉರ್ ರೆಹಮಾನ್, ಆನಂದ ಲಕ್ಕೂರು ಮಾನವೀಯ ವ್ಯಕ್ತಿಗಳಾಗಿದ್ದರು ಎಂದು ಸ್ಮರಿಸಿದರು.
ಹಿಂದೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವ್ಯಾಪ್ತಿಯೊಳಗೆ ಎಲ್ಲ ಭಾಷೆಗಳು ಬರುತ್ತಿದ್ದವು. ಈಗ ಬೇರೆ ಬೇರೆ ಅಕಾಡೆಮಿಗಳು ಇವೆ. ಆದರೂ ಪ್ರತ್ಯೇಕತೆ ಸಾಧಿಸಬಾರದು. ಎಲ್ಲರೂ ಒಂದಾಗಿ ಸಮಾಜವನ್ನು ಅರ್ಥ ಮಾಡಿಕೊಳ್ಳಬೇಕು. ಉರ್ದು ಸಾಹಿತ್ಯವನ್ನು ಓದುವ ಮೂಲಕ ಮುಸ್ಲಿಮರ ಬಗೆಗಿನ ಪೂರ್ವಗ್ರಹಗಳನ್ನು ದೂರ ಮಾಡಿಕೊಳ್ಳಬಹುದು ಎಂದು ಪ್ರತಿಪಾದಿಸಿದರು.
ಸಾಹಿತಿ ಬಿ.ಟಿ. ಲಲಿತಾ ನಾಯಕ್ ಮಾತನಾಡಿ, ‘ಒಬ್ಬ ಮನುಷ್ಯ ಯಾವ ರೀತಿ ಇರುತ್ತಾನೆ ಎನ್ನುವುದನ್ನು ಅಂತರಾಳಕ್ಕೆ ಹೊಕ್ಕು ನೋಡಬೇಕು. ಯಾವುದೇ ಸಮುದಾಯದವರಾದರೂ ಅವರೊಳಗೆ ಬ್ರಾಹ್ಮಣ್ಯ ಇದ್ದರೆ ವಿರೋಧಿಸಬೇಕು’ ಎಂದು ಹೇಳಿದರು.
ಆನಂದ ಲಕ್ಕೂರು ಕವಿತೆ ಮೂಲಕ ಗಮನ ಸೆಳೆದಿದ್ದರು. ಖಲೀಲ್ ಉರ್ ರೆಹಮಾನ್ ಅನುವಾದದಲ್ಲಿ ಹೆಸರು ಮಾಡಿದ್ದರು. ಕಮಲಾ ಹಂಪನಾ ಸಾಹಿತಿಯಾಗಿ ದೊಡ್ಡ ಹೆಸರು. ಅವರು ದೇಹವನ್ನು ದಾನ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.