ಬೆಂಗಳೂರು: ‘ರಾಜಧಾನಿ ಬೆಂಗಳೂರಿನಲ್ಲಿ ಇಂದು ಇಷ್ಟಾದರೂ ಕನ್ನಡ ಕೇಳುತ್ತಿದ್ದರೆ ಅದಕ್ಕೆ ಕನ್ನಡ ಹೋರಾಟಗಾರರೇ ಕಾರಣ‘ ಎಂದು ಸಾಹಿತಿ ಎಲ್. ಹನುಮಂತಯ್ಯ ತಿಳಿಸಿದರು.
ಎಚ್ಎಎಲ್ನ ಎಲ್ಸಿಎ(ತೇಜಸ್) ವಿಭಾಗದ ತೇಜಸ್ ಕನ್ನಡ ಸಂಘ ನೀಡುವ ‘ಕನ್ನಡ ತೇಜಸ್ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು. ಪ್ರಶಸ್ತಿಯು ₹10 ಸಾವಿರ ನಗದು ಮತ್ತು ಪ್ರಶಸ್ತಿ ಫಲಕವನ್ನೊಳಗೊಂಡಿದೆ.
‘ಕನ್ನಡ ಹೋರಾಟ ಯಾವುದೇ ಭಾಷೆ ಜನರ ವಿರುದ್ದ ಅಲ್ಲ, ಅದು ಕನ್ನಡದ ಹಿತರಕ್ಷಿಸಲು ಎಂಬುದನ್ನು ಹೋರಾಟಗಾರರು ಮರೆಯಬಾರದು. ಹಾಗೇ ಪರಭಾಷಿಕರು ಕನ್ನಡಕ್ಕೆ ನೀಡಿರುವ ಕೊಡುಗೆಯನ್ನು ಮರೆಯಲಾಗದು‘ ಎಂದು ಹೇಳಿದರು.
ಕನ್ನಡ ಚಿಂತಕ ರಾ.ನಂ.ಚಂದ್ರಶೇಖರ್ ಮಾತನಾಡಿ, 'ಭಾಷೆ-ಸಂಸ್ಕೃತಿಗಳಿಗೆ ಹೆಚ್ಚು ಹಣ ಮಿಸಲಿಟ್ಟಿರುವ ಮತ್ತು ಸಾಧಕರನ್ನು ಗುರುತಿಸುವಲ್ಲಿ ಕರ್ನಾಟಕ ಸರ್ಕಾರ ಎಲ್ಲ ರಾಜ್ಯ ಸರ್ಕಾರಗಳಿಗಿಂತ ಮುಂಚೂಣಿಯಲ್ಲಿದೆ. ಆದರೆ, ಕನ್ನಡನಾಡು-ನುಡಿಯ ರಕ್ಷಣೆಗೆ ದೊಡ್ಡ ತ್ಯಾಗ ಮಾಡಿರುವ ಕನ್ನಡ ಹೋರಾಟಗಾರರನ್ನು ಗುರುತಿ ಸುತ್ತಿಲ್ಲ. ಈ ಕೊರತೆಯನ್ನು ಗಮನಿಸಿ ಕನ್ನಡನಾಡು-ನುಡಿಯ ಉತ್ಕರ್ಷಕ್ಕೆ ಶ್ರಮಿಸಿದವರಿಗಾಗಿ ‘ಕನ್ನಡ ತೇಜಸ್ ಪ್ರಶಸ್ತಿ’ಯನ್ನು ಕನ್ನಡ ಸಂಘ ಸ್ಥಾಪಿಸಿದೆ' ಎಂದರು.
ಸಂಘದ ಅಧ್ಯಕ್ಷ ಚಂದ್ರಶೇಖರಪ್ಪ ಎಂ., ಪ್ರಧಾನ ಕಾರ್ಯದರ್ಶಿ ಉಮಾಶಂಕರ ಎಚ್.ಎಸ್., ಎಲ್. ಹನುಮಂತಯ್ಯನವರ ಪತ್ನಿ ವಿಜಯಾಂಬಿಕೆ, ಎಚ್.ಎ.ಎಲ್. ಕೇಂದ್ರೀಯ ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಡಿ. ದೇವರಾಜ್, ನಿಕಟ ಪೂರ್ವ ಅಧ್ಯಕ್ಷ ಮನುಕುಮಾರ್ ಎಸ್.ಆರ್, ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.