ಬೆಂಗಳೂರು: ‘ಪುರುಷ ಪ್ರಧಾನ ಸಮಾಜದಲ್ಲಿ ಇಂದಿಗೂ ಸ್ತ್ರೀಯರ ಬಗೆಗಿನ ಮನಃಸ್ಥಿತಿ ಬದಲಾಗಿಲ್ಲ. ಆದ್ದರಿಂದ ಪುರುಷರ ಮನಃಸ್ಥಿತಿ ಬದಲಿಸುವ ಕೆಲಸ ಮಾಡಬೇಕು’ ಎಂದು ಲೇಖಕಿ ಕೆ.ಆರ್. ಸಂಧ್ಯಾರೆಡ್ಡಿ ಹೇಳಿದರು.
ಕರ್ನಾಟಕ ಲೇಖಕಿಯರ ಸಂಘ ನಗರದಲ್ಲಿ ಭಾನುವಾರ ಹಮ್ಮಿಕೊಂಡ ‘2023ನೇ ಸಾಲಿನ ವಿವಿಧ ದತ್ತಿ ಪ್ರಶಸ್ತಿ’ಗಳ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ, ಮಾತನಾಡಿದರು.
‘ಸಮಾನತೆಯನ್ನು ಎತ್ತಿಹಿಡಿದ ಬಸವಣ್ಣ ಅವರೂ ‘ನಾರಿಗೆ ಗುಣವೇ ಶೃಂಗಾರ’ವೆಂದು ಹೇಳಿದ್ದರು. ಅಂದರೆ, ಗುಣ ನಾರಿಗೆ ಮಾತ್ರವೇ ಅಂದಂತೆ ಆಗುತ್ತದೆ. ಕನಕದಾಸರು ‘ಸ್ತ್ರೀ ರೂಪ ಕಣ್ಣಿಗೆ ಕಾಣದಂತೆ ಮಾಡು’ ಎಂದಿದ್ದರು. ಇತ್ತೀಚೆಗೆ, ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡುವಾಗ ಆಟೊ ಚಾಲಕರೊಬ್ಬರು ಹೆಂಗಸರದ್ದೇ ತಪ್ಪು, ಅವರೇಕೆ ಹೋಗಬೇಕಿತ್ತು ಎಂದು ಪ್ರಶ್ನಿಸಿದರು. ಸ್ತ್ರೀಯರ ಬಗೆಗಿನ ಮನಃಸ್ಥಿತಿ ಬದಲಾಗಿಲ್ಲ ಎನ್ನುವುದನ್ನು ಈ ಮಾತಿನಲ್ಲಿ ಕಾಣಬಹುದಾಗಿದೆ’ ಎಂದರು.
‘ಮಹಿಳೆಯರು ಸಾಂಸಾರಿಕ ಜವಾಬ್ದಾರಿಗಳನ್ನು ನಿಭಾಯಿಸಿಕೊಂಡು, ಸಾಹಿತ್ಯ ಕ್ಷೇತ್ರಕ್ಕೆ ಬರುವಷ್ಟರಲ್ಲಿ ವಯಸ್ಸಾಗಿರುತ್ತದೆ. ಲೇಖಕಿಯರ ಸಾಹಿತ್ಯ ಗಮನಿಸಿದರೆ ಇದು ನಮಗೆ ತಿಳಿಯುತ್ತದೆ. ಎಷ್ಟೋ ಮಹಿಳೆಯರು ತಮ್ಮ ಅಭಿವ್ಯಕ್ತಿಯನ್ನು ಅಡಗಿಸಿಕೊಂಡು, ಜೀವನದ ಕಡೆಯ ಘಟ್ಟದಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಪ್ರವೇಶಿಸುತ್ತಾರೆ’ ಎಂದರು.
ಕವಿ ಎಚ್.ಎಸ್.ಶಿವಪ್ರಕಾಶ್, ‘ಕಾವ್ಯದಲ್ಲಿ ಸಾರ್ವಕಾಲಿಕ ಪ್ರಸ್ತುತತೆ ಇರಬೇಕು. ಕಾಯಿ ಮಾಗುವವರೆಗೆ ನಾವು ಕಾಯಬೇಕಾಗುತ್ತದೆ. ಮಾಗುವ ಶಕ್ತಿ ಎಲ್ಲ ಬರಹಗಾರರಿಗೆ ಅಗತ್ಯ. ವಾಸ್ತವದಲ್ಲಿ ಸಾಹಿತ್ಯಕ್ಕೆ ಜಾತಿ, ಲಿಂಗವಿಲ್ಲ. ಆದರೆ, ಕೆಲವು ಸಲ ಬರಹವನ್ನು ಮಹಿಳೆ ಬರೆದದ್ದೋ, ಪುರುಷ ಬರೆದದ್ದೋ ಎಂದು ನೋಡುತ್ತೇವೆ. ನನ್ನ ಮೇಲೆ ಪುರುಷ ಲೇಖಕರಷ್ಟೇ ಅಕ್ಕಮಹಾದೇವಿ ಸೇರಿ ಅನೇಕ ಲೇಖಕಿಯರು ಪ್ರಭಾವ ಬೀರಿದ್ದಾರೆ. ಮಹಿಳಾ ಸಾಹಿತ್ಯವನ್ನು ಪುರುಷ ಸಾಹಿತ್ಯದ ವಿರೋಧಿಯೆಂದು ಗುರುತಿಸದೆ, ಸಾಹಿತ್ಯದ ಆವಿಷ್ಕಾರವೆಂದು ಗೌರವಿಸಿ ಪ್ರೋತ್ಸಾಹಿಸಬೇಕು’ ಎಂದು ತಿಳಿಸಿದರು.
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪ ಪ್ರಾಸ್ತಾವಿಕ ಮಾತುಗಳನ್ನಾಡಿದರು. ‘ಸುಧಾ’ ವಾರಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಚ.ಹ. ರಘುನಾಥ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.